ಹಾಸನ: `ಸಮಾಜ ಸರಿದಾರಿಯಲ್ಲಿ ಸಾಗುವಂತೆ ನೋಡಬೇಕಾಗಿರುವ ಜನಪ್ರತಿನಿಧಿಗಳೇ ಅನೇಕ ರಾಷ್ಟ್ರಗಳಲ್ಲಿ ದುಷ್ಟ ಶಕ್ತಿ ಪೋಷಿಸುವ ಕೆಲಸ ಮಾಡುತ್ತಿರುವುದು ಆತಂಕದ ವಿಚಾರ. ಯುವಜನಾಂಗ ಈ ಬಗ್ಗೆ ಎಚ್ಚರವಹಿಸಿ ವಿಶ್ವದಲ್ಲಿ ಶಾಂತಿ ಮಂತ್ರ ಸಾರುವ ಕೆಲಸ ಮಾಡಬೇಕು~ ಎಂದು ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ನುಡಿದರು.
ರಾಷ್ಟ್ರೀಯ ಸೇವಾ ಯೋಜನೆ, ಯುವಜನ ಸೇವಾ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ವಿಜ್ಞಾನ ಕಾಲೇಜುಗಳ ಆಶ್ರಯದಲ್ಲಿ ನಗರದ ವಿಜ್ಞಾನ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಭಾವೈಕ್ಯ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆ ಯಾವುದೇ ಭೇದಭಾವ ಇಲ್ಲದೆ ಜನರ ನಡುವೆ ಭಾವೈಕ್ಯ ಮೂಡಿಸುವ ಕಾರ್ಯ ಮಾಡುತ್ತದೆ. ಜತೆಗೆ ಶಿಸ್ತು ಸಂಯಮ ಕಲಿಸುತ್ತದೆ. ವಿದ್ಯಾರ್ಥಿಗಳು ಇಂಥ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಶಾಸಕ ಎಚ್.ಎಸ್. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಸಕಲೇಶಪುರ ಶಾಸಕ ಎಚ್. ಕೆ. ಕುಮಾರಸ್ವಾಮಿ, ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಎ.ಎಲ್. ಮುರಳೀಧರ, ಕಲಾ ಕಾಲೇಜಿನ ಪ್ರಾಂಶುಪಾಲ ಎಚ್.ವಿ. ಲಕ್ಷ್ಮೀನಾರಾಯಣ, ಡಾ. ಡಿ. ಜಿ. ಕೃಷ್ಣೇಗೌಡ, ರಾಮೇಗೌಡ ಇದ್ದರು.
ಪ್ರೊ. ಕೃಷ್ಣಪ್ಪ ಸ್ವಾಗತಿಸಿದರು. ಶಿಬಿರದ ಅಂಗವಾಗಿ ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಯಿಂದ ಕಾಲೇಜಿನವರೆಗೆ ಜಾಥಾ ನಡೆಸಲಾಯಿತು. ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್ ಚಾಲನೆ ನೀಡಿದರು. ವಿವಿಧ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.