ಬೆಂಗಳೂರು: ಪೆಟ್ಟಿಗೆಯಲ್ಲಿ ತುಂಬಿ ರಸ್ತೆ ಬದಿಗೆ ಎಸೆದಿದ್ದ ಪಟಾಕಿಗಳು ಸ್ಫೋಟಗೊಂಡು ಭಾರಿ ಶಬ್ಧ ಕೇಳಿಬಂದ ಹಿನ್ನೆಲೆಯಲ್ಲಿ ಲಾಲ್ಬಾಗ್ ಸಮೀಪದ ಮಾವಳ್ಳಿಯಲ್ಲಿ ಶುಕ್ರವಾರ ರಾತ್ರಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅಪರಿಚಿತ ವ್ಯಕ್ತಿಗಳು ಪಟಾಕಿಗಳನ್ನು ಪೆಟ್ಟಿಗೆಯೊಂದರಲ್ಲಿ ಹಾಕಿ ಮಾವಳ್ಳಿಯ ಏಳನೇ ಅಡ್ಡರಸ್ತೆ ಬದಿಯಲ್ಲಿ ಎಸೆದು ಹೋಗಿದ್ದರು. ಕಿಡಿಗೇಡಿಗಳು ಸೇದಿ ಎಸೆದಿದ್ದ ಸಿಗರೇಟು ತುಂಡಿನಿಂದ ಆ ಪೆಟ್ಟಿಗೆಗೆ ರಾತ್ರಿ ಏಳು ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡು ಪಟಾಕಿಗಳು ಸ್ಫೋಟಗೊಂಡವು. ಇದರಿಂದ ಭಾರಿ ಸದ್ದು ಕೇಳಿ ಬಂತು.
ಬಾಂಬ್ ಸ್ಫೋಟಗೊಂಡಿದೆ ಎಂದು ಭಾವಿಸಿದ ಜನರು ಘಟನಾ ಸ್ಥಳದಲ್ಲಿ ಜಮಾಯಿಸಿದರು. ಈ ವಿಷಯ ತಿಳಿದ ಹಿರಿಯ ಪೊಲೀಸ್ ಅಧಿಕಾರಿಗಳು, ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ಶ್ವಾನದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.