ನವದೆಹಲಿ (ಪಿಟಿಐ): ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸುವ `ಆಧಾರ್' ಆಧಾರಿತ ಯೋಜನೆಯನ್ನು ಆತುರಾತುರವಾಗಿ ಜಾರಿಗೊಳಿಸುತ್ತಿಲ್ಲ ಎಂದು ಸರ್ಕಾರ ಗುರುವಾರ ಸಮರ್ಥಿಸಿಕೊಂಡಿದೆ.
ಹಂತ ಹಂತವಾಗಿ ಜಾರಿಯಾಗಲಿರುವ ಈ ಕ್ರಮವು ಹಣ ಸೋರಿಕೆ, ವಿಳಂಬ, ನಕಲು ಮಾಡುವಿಕೆ, ಒಬ್ಬರ ಹೆಸರಿನಲ್ಲಿ ಮತ್ತೊಬ್ಬರು ಸವಲತ್ತು ಪಡೆಯುವುದು ಇತ್ಯಾದಿ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ಹಣಕಾಸು ಸಚಿವ ಪಿ.ಚಿದಂಬರಂ ರಾಜ್ಯಸಭೆಯಲ್ಲಿ ಹೇಳಿದರು.
ಬಿಜೆಪಿಯ ಪ್ರಕಾಶ್ ಜಾವಡೇಕರ್ ಅವರು ಕೇಳಿದ ಪ್ರಶ್ನೆಗೆ ಚಿದಂಬರಂ ಉತ್ತರ ನೀಡಿ, ಕೇಂದ್ರ/ ಕೇಂದ್ರ ಪ್ರಾಯೋಜಕತ್ವದ 34 ಕಾರ್ಯಕ್ರಮಗಳಿಗೆ ಅನ್ವಯವಾಗುವಂತೆ ಖಾತೆಗೆ ನೇರವಾಗಿ ಹಣ ವರ್ಗಾಯಿಸಲು ಸರ್ಕಾರ ನಿರ್ಧರಿಸಿದೆ; ಜನವರಿ 1ರಿಂದ ರಾಷ್ಟ್ರದ 43 ಜಿಲ್ಲೆಗಳಲ್ಲಿ ಹಂತಹಂತವಾಗಿ ಇದನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಈ ವ್ಯವಸ್ಥೆ ಜಾರಿಗೊಳಿಸಲು ಬೇಕಾದ ತಂತ್ರಜ್ಞಾನ ನಮ್ಮಲ್ಲಿದೆ. ಆರಂಭದಲ್ಲಿ ಕೆಲವು ಎಡರುತೊಡರುಗಳು ಎದುರಾಗಬಹುದು.
ಆದರೆ ಅವನ್ನೆಲ್ಲಾ ಆಗಿಂದಾಗ್ಗೇ ನಿವಾರಿಸಿಕೊಳ್ಳಲಾಗುವುದು. ಇದಕ್ಕೆ ಪೂರಕವಾಗಿ ಬ್ಯಾಂಕ್ ಮ್ಯಾನೇಜರುಗ ಮತ್ತಿತರ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದರು.