ಕಮಲನಗರ: ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ವತಿಯಿಂದ 2013–14ನೇ ಸಾಲಿಗಾಗಿ ‘ಆತ್ಮ’ ಯೋಜನೆಯಡಿ ರೈತರಿಗೆ ತರಬೇತಿ ಕಾರ್ಯಕ್ರಮ ಸಮೀಪದ ಹೊಳ ಸಮುದ್ರ ಗ್ರಾಮದಲ್ಲಿ ಗುರುವಾರ ನಡೆಯಿತು.
ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀರಂಗ ಪರಿಹಾರ್ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಅಪ್ಪಾರಾವ್ ಕದಮ್ ಮಾತನಾಡಿ, ಹೈನುಗಾರಿಕೆ ಲಾಭದಾಯಕ ಉದ್ಯಮ ವಾಗಿದ್ದು, ರೈತರು ಹೈನುಗಾರಿಕೆಯತ್ತ ಒಲವು ತೋರಿಸಿದರೆ ಆರ್ಥಿಕವಾಗಿ ಸದೃಢರಾಗಬಹುದು ಎಂದರು.
ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಶೈಲೇಂದ್ರ ಕುಲಕರ್ಣಿ ಮಾತನಾಡಿ, ಪಶು ಸಂಗೋಪನಾ ಇಲಾಖೆ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಅನುದಾನ ನೀಡುತ್ತಿವೆ. ರೈತರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಮಲನಗರ ಪಶು ವೈದ್ಯಾಧಿಕಾರಿ ಕಾಮರಾಜ ಜಗ್ಗಿನ್ನವರ್ ಅವರು, ದನ ಕರುಗಳಿಗೆ ಸಮಯಕ್ಕೆ ಅನುಗುಣವಾಗಿ ನೀಡಬೇಕಾದ ಲಸಿಕೆಗಳು ಮತ್ತು ರೋಗಗಳಿಂದ ಜಾನುವಾರುಗಳನ್ನು ರಕ್ಷಿಸಲು ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕಮಲನಗರ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಭೀಮರಾವ್ ಹುಲಸೂರೆ ಅವರು, ಸರ್ಕಾರದಿಂದ ಕೃಷಿ ಕ್ಷೇತ್ರಕ್ಕೆ ನೀಡುತ್ತಿರುವ ಅನುದಾನ, ವಿವಿಧ ಯೋಜನೆಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.
ತಾಲ್ಲೂಕು ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಪಕ ಪಾಂಡುರಂಗ್ ಪಾಟೀಲ, ಹಾಲು ಉತ್ಪಾದಕರ ಸಂಘದ ಸದಸ್ಯ ಹರಿದೇವ್ ಶಿಂಧೆ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷ ಭರತ್ ಕದಮ್ ಅಧ್ಯಕ್ಷತೆ ವಹಿಸಿದ್ದರು.
ಎಪಿಎಂಸಿ ಸದಸ್ಯ ತುಕಾರಾಮ ಜಾಧವ್, ಗ್ರಾ.ಪಂ. ಸದಸ್ಯರಾದ ಗೋಪಾಲರಾವ್ ಪಾಟೀಲ, ದಿಲೀಪ ಬೆಣ್ಣೆ, ಮಾಣಿಕ್ ಬಿರಾದಾರ್ ಇದ್ದರು. ಸಂಜೀವಕುಮಾರ ಬೆಣ್ಣೆ ಸ್ವಾಗತಿಸಿ, ನಿರೂಪಿಸಿದರು.