ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮವಿಶ್ವಾಸವೊಂದೇ ಬಹುದೊಡ್ಡ ಆಸರೆ: ಉಮಾಶ್ರೀ

Last Updated 3 ಡಿಸೆಂಬರ್ 2013, 19:29 IST
ಅಕ್ಷರ ಗಾತ್ರ

ಬೆಂಗಳೂರು: ‘ಅಂಗವೈಕಲ್ಯವನ್ನು ಮೀರಿ ಸಾಧನೆ ಮಾಡಲು ಆತ್ಮವಿಶ್ವಾಸವೊಂದೇ ಬಹುದೊಡ್ಡ ಆಸರೆ. ಅದನ್ನು ರೂಢಿಸಿ ಕೊಳ್ಳಿ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಸಲಹೆ ನೀಡಿದರು.

ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣ­ದಲ್ಲಿ ಮಂಗಳವಾರ ಆಯೋಜಿಸಿದ್ದ ‘ವಿಶ್ವ ಅಂಗವಿ ಕಲರ ದಿನಾ ಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಎಲ್ಲ ಅಂಗವಿಕಲರು ಪ್ರೀತಿ ಪಡೆಯಲು  ಅರ್ಹರು. ಸ್ವಾಭಿಮಾನದ ಚಿಲುಮೆಯಂತಿರುವ ಅವರನ್ನು ಸದಾ ಗೌರವಿಸುವುದು ಸಮಾಜದ ಆದ್ಯ ಕರ್ತವ್ಯ’ ಎಂದು ಅಭಿಪ್ರಾಯಪಟ್ಟರು.

‘ಕೇವಲ ಕಾನೂನು ಹಾಗೂ ಸರ್ಕಾರದ ಸಹಾಯದಿಂದ ಮಾತ್ರ ಅಂಗವಿಕಲರು ಸಮಸ್ಯೆ ಯಿಂದ ಹೊರಬರಲು ಸಾಧ್ಯ ವಿಲ್ಲ. ಬದಲಿಗೆ ಸವಾಲುಗಳನ್ನು ಸ್ವೀಕರಿಸುವ ಛಾತಿಯನ್ನು ಬೆಳೆಸಿಕೊಳ್ಳಬೇಕು’ ಎಂದರು. ‘ಮಧ್ಯವರ್ತಿಗಳ ಹಾವಳಿಯಿಂದಾಗಿ  ಸರ್ಕಾರ ದಿಂದ ದೊರೆಯುತ್ತಿರುವ ಸವಲತ್ತುಗಳು ಅಂಗವಿ ಕಲರನ್ನು ತಲುಪುತ್ತಿಲ್ಲ. ಸವಲತ್ತು ಪಡೆಯುವ ಸಲುವಾಗಿ ನೇರವಾಗಿ ಇಲಾಖೆಯನ್ನು ಸಂಪರ್ಕಿ ಸಬೇಕು’ ಎಂದು ಹೇಳಿದರು.

ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಕಚೇರಿಯ ಆಯುಕ್ತ ಕೆ.ಎಸ್.ರಾಜಣ್ಣ, ‘ಶೇ 40ರಷ್ಟು ದೈಹಿಕ ಊನವನ್ನು ಹೊಂದಿರುವವರನ್ನು ಕೂಡ ಅಂಗವಿಕಲರೆಂದು ಪರಿಗಣಿಸಿ, ಅವರಿಗೂ ಮಾಸಾಶನ ಒದಗಿಸಬೇಕು’ ಎಂದು ಮನವಿ ಮಾಡಿದರು. ‘ಶಿಕ್ಷಣದಿಂದ ವಂಚಿತರಾಗಿರುವ ಅಂಗವಿಕ ಲರಿಗೆ 5ರಿಂದ 10ನೇ ತರಗತಿಯವರೆಗೆ ವಯಸ್ಕರ ಶಿಕ್ಷಣವನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಬೇಕು’ ಎಂದು ಹೇಳಿದರು.

ಪ್ರಶಸ್ತಿಗೆ ಭಾಜನರಾದವರು: ಅಂಗವಿಕಲ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ ಸ್ವಯಂ ಸೇವಾ ಸಂಸ್ಥೆಗಳಾದ ಮಾತೃಶ್ರೀ ಮನೋವಿಕಾಸ ಕೇಂದ್ರ, ಆಶಾದೀಪ ಅಂಗವಿಕಲ ಸರ್ವ ಅಭಿವೃದ್ಧಿ ಸೇವಾ ಸಂಸ್ಥೆ, ವಿದ್ಯಾರಣ್ಯ, ವಿನಾಯಕ ಎಜುಕೇಷನ್ ಸೊಸೈಟಿ, ಆಲಂಬ ಚಾರಿಟಬಲ್ ಟ್ರಸ್ಟ್ ಗೆ  ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು  ತಲಾ ₨ 25 ಸಾವಿರ ನಗದು, ಫಲಕವನ್ನು ಒಳಗೊಂಡಿದೆ.  ಬೆಳಗಾವಿಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯ ಸುಧಾವತಿ ರಾಘವೇಂದ್ರ, ಗುಲ್ಬರ್ಗದ ಅಂಧ ಮತ್ತು ಕಿವುಡ ಮಕ್ಕಳ ಸರ್ಕಾರಿ ಪಾಠಶಾಲೆಯ ಮೀನಾಕ್ಷಮ್ಮ ಪಾಟೀಲ, ಕೃಷ್ಣ ಚೈತನ್ಯ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯಿನಿ ಪಿ.ರೋಹಿಣಿ, ಮೈಸೂರಿನ ಕಿವುಡು ಮಕ್ಕಳ ಸರ್ಕಾರಿ ಪಾಠ ಶಾಲೆಯ ಸಹಾಯಕ ಶಿಕ್ಷಕ ಪಿ.ಗಂಗಾಧರ, ಕುಂದಾಪುರದ ಸೇಂಟ್ ಆಗ್ನೇಸ್ ವಿಶೇಷ  ಶಾಲೆಯ ಶಿಕ್ಷಕಿ ಫಿಲೋಮಿನಾ ಜೆಸಿಂತಾ ಎಲ್ವೀರಾ ಅವರಿಗೆ ‘ಉತ್ತಮ ಶಿಕ್ಷಕ’ ಸಾಲಿನಲ್ಲಿ ತಲಾ ₨10 ಸಾವಿರ, ಫಲಕವನ್ನು ಒಳಗೊಂಡ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ವೈಯಕ್ತಿಕ ಸ್ತರದಲ್ಲಿ ಬೆಂಗಳೂರಿಗರಾದ  ವಿ.ಎಂ.ಸಿದ್ದರಾಜು, ಚಿದಂಬರ ವಿಷ್ಣುಜೋಶಿ, ಎಲ್.ಶೇಖರ ನಾಯಕ್,  ಮೈಸೂರಿನ ಡಾ.ಜಿ.ಬಾಲಾಜಿ, ಪುತ್ತೂರಿನ ಸುರೇಶ ನಾಯಕ್, ರಾಯಚೂರಿನ ಶಬಾನ ಬೇಗಂ , ವಿಜಾಪುರದ ಮಲ್ಲಿಕಾರ್ಜುನ ಶರಣಪ್ಪ ಖೇಡ, ಗುಲ್ಬರ್ಗದ ಭೀಮಾಶಂಕರ್ ಅವರಿಗೆ ತಲಾ  ₨10 ಸಾವಿರ ನಗದು ಪ್ರಶಸ್ತಿ, ಫಲಕವನ್ನು ನೀಡಲಾಯಿತು.

ಅಂಗವಿಕಲ ಸಂಘಟನೆ ಪ್ರತಿಭಟನೆ!
ಒಂದೆಡೆ ಸರ್ಕಾರ ಅಂಗವಿಕಲರ ದಿನಾ ಚರಣೆಯ ಸಮಾರಂಭವನ್ನು ಆಯೋಜಿ ಸಿದ್ದರೆ ಮತ್ತೊಂದರೆ ಅಂಗವಿಕಲರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕ್ರೀಡಾಂಗಣದ ಮುಂಭಾಗದ ಧರಣಿ ನಡೆಸಿದರು.ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವಿವಿಧ ಹುದ್ದೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ  ಕಾರ್ಯನಿರ್ವಹಿಸುತ್ತಿರುವ ಅಂಗವಿಕಲರು ಹುದ್ದೆಯನ್ನು ಕಾಯಂಗೊಳಿಸಿ ಎಂದು ಆಗ್ರಹಿಸಿ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಶ್ವಿನಿ ಕುಲಕರ್ಣಿ. ‘ 2007–08ರಲ್ಲಿ ಕೆಪಿಟಿಸಿಎಲ್ ನ ವಿವಿಧ ಹುದ್ದೆಗಳಿಗೆ ಸುಮಾರು 600 ಮಂದಿಯನ್ನು ನೇಮಕ ಮಾಡಿಕೊಳ್ಳಲಾಯಿತು. ಆದರೆ, ಈವರೆಗೂ ಹುದ್ದೆಯನ್ನು ಕಾಯಂ ಮಾಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಉದ್ಯೋಗ ಭದ್ರತೆಯಿಲ್ಲದೇ ಹೋದರೆ ಅಂಗವಿಕಲರಿಗೆ ಸಾಮಾಜಿಕ ಭದ್ರತೆ ದೊರೆಯಲು ಸಾಧ್ಯವೇ?’ ಎಂದು ಪ್ರಶ್ನಿಸಿದ ಅವರು, ‘ 2009ರಲ್ಲಿ ವಿಶ್ವ ಅಂಗವಿಕಲ ದಿನಾಚರಣೆ ಯಂದೇ ಪ್ರತಿಭಟನೆ ನಡೆಸಲಾಯಿತು.ಕಾಯಂ ಮಾಡುವ ಭರವಸೆಯನ್ನು ಅಂದಿನ ಮುಖ್ಯ ಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ನೀಡಿದ್ದರು. ಆದರೆ, ಅದಿನ್ನೂ ಜಾರಿಯಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕೆಪಿಟಿಸಿಎಲ್ ವ್ಯವಸ್ಥಾಪಕರನ್ನು ಕೂಡಲೇ ಕರೆಸಿ, ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು’ ಎಂದು ಒತ್ತಾಯಿಸಿದರು. ಇನ್ನೂ  ಮಾಸಾಶನ ಸಮರ್ಪಕವಾಗಿ ದೊರೆ­ಯುತ್ತಿಲ್ಲ, ಬ್ರೈಲ್ ಲಿಪಿಯ ಪಠ್ಯಪುಸ್ತಕಗಳು ಲಭ್ಯವಿಲ್ಲ. ಇದನ್ನು  ಕೂಡಲೇ ಒದಗಿಸುವಂತೆ ಅಂಧರ ಸಂಘವು ಸರ್ಕಾರ ವಿರುದ್ಧ ಘೋಷಣೆ ಕೂಗಿತು.

ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಸಚಿವೆ ಉಮಾಶ್ರೀ, ‘ಕೆಪಿಟಿಸಿಎಲ್‌ನಲ್ಲಿ ವಿವಿಧ ಹುದ್ದೆ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗವಿಕಲರ ಸಮಸ್ಯೆಗಳ ಬಗ್ಗೆ ಈಗಷ್ಟೆ ಮಾಹಿತಿ ದೊರೆತಿದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿ ಬಗೆಹರಿಸಲು  ಮುಂದಾಗುತ್ತೇನೆ’ ಎಂದು ತಿಳಿಸಿದರು.
‘ಸಾಧ್ಯವಾದರೆ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸುತ್ತೇನೆ’ ಎಂದು ಭರವಸೆ   ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT