ಬೆಂಗಳೂರು: ‘ಅವಕಾಶವಾದಿ ರಾಜಕಾರಣದ ಇಂದಿನ ಸಂದರ್ಭದಲ್ಲಿ ಡಾ.ಬಿ.ಡಿ.ಜತ್ತಿ ಅವರ ರಾಜಕೀಯ ಜೀವನ ಎಲ್ಲರಿಗೂ ಆದರ್ಶಪ್ರಾಯವಾಗಿದೆ’ ಎಂದು ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟರು.
ಡಾ.ಬಿ.ಡಿ.ಜತ್ತಿ ಅವರ 101ನೇ ಜನ್ಮದಿನೋತ್ಸವದ ಅಂಗವಾಗಿ ಬಸವ ಸಮಿತಿಯು ಶನಿವಾರ ನಗರದಲ್ಲಿ ಆಯೋಜಿಸಿದ್ದ ‘ಬಸವ ಸಮಿತಿ ಸಂಸ್ಥಾಪಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರರು.
ಡಾ.ಬಿ.ಡಿ.ಜತ್ತಿ ಅವರು ಗಾಂಧೀಜಿ ಮತ್ತು ಬಸವಣ್ಣನವರ ತತ್ವಗಳನ್ನು ತಮ್ಮ ರಾಜಕೀಯ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಿದ್ದರೆ ದೇಶದ ಅತ್ಯುನ್ನತ ಹುದ್ದೆಯಲ್ಲಿ ಹೆಚ್ಚು ಕಾಲ ಇರುವ ಅವಕಾಶ ಅವರಿಗಿತ್ತು. ಆದರೆ, ಅವರು ಎಂದೂ ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಕೀಳುಮಟ್ಟದ ರಾಜಕಾರಣಕ್ಕೆ ಮುಂದಾಗಲಿಲ್ಲ ಎಂದು ಶ್ಲಾಘಿಸಿದರು.
ಬಸವಣ್ಣನವರ ತತ್ವಗಳನ್ನು ಇಡೀ ವಿಶ್ವಕ್ಕೆ ಸಾರುವ ರಾಷ್ಟ್ರಮಟ್ಟದ ವಿಶ್ವವಿದ್ಯಾಲಯವೊಂದು ಸ್ಥಾಪನೆಯಾಗಬೇಕೆಂಬುದು ಅವರ ಉದ್ದೇಶವಾಗಿತ್ತು. ಅದನ್ನು ಈಡೇರಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿ, ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಲಿಂಗಸಮಾನತೆಗಳನ್ನು ತರಲು ಶ್ರಮಿಸಿದ ಶರಣ ಬಸವಣ್ಣನವರ ತತ್ವ, ಚಿಂತನೆಗಳನ್ನು ವಿಶ್ವದಾದ್ಯಂತ ಪ್ರಚಾರಪಡಿಸಬೇಕು ಎಂದು ಹೇಳಿದರು.
ಬಸವ ಮಾರ್ಗ ಪತ್ರಿಕೆಯ ಸಂಪಾದಕ ಡಾ.ಪ್ರಭಾಶಂಕರ ಪ್ರೇಮಿ ಮಾತನಾಡಿ, ಬಸವಾದಿ ಶರಣರ ತತ್ವಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವುದು ಡಾ.ಬಿ.ಡಿ.ಜತ್ತಿ ಅವರ ಬಹುದೊಡ್ಡ ಕನಸಾಗಿತ್ತು. ಹಾಗಾಗಿ ಬಸವ ಸಮಿತಿಯನ್ನು ಸ್ಥಾಪಿಸಿದರು. ಸಮಿತಿಯ ಮೂಲಕ ಎಲ್ಲ ಭಾಷೆಗಳಲ್ಲಿ ಶರಣರ ತತ್ವಗಳನ್ನು ಪ್ರಕಟಿಸಲು ಕ್ರಮ ಕೈಗೊಂಡಿದ್ದರು ಎಂದು ಹೇಳಿದರು.