ಇತ್ತೀಚೆಗೆ ವಿಜಾಪುರದಲ್ಲೊಬ್ಬ ಬಾಲಕ ಬೆಂಕಿಗಾಹುತಿಯಾದ. ಬೆಂಗಳೂರಿನಲ್ಲೊಬ್ಬ ಬಾಲೆ ನೇಣು ಬಿಗಿದುಕೊಂಡು ಸಾವಿಗೆ ಬಲಿಯಾದಳು. ಪತ್ರಿಕೆಗಳಲ್ಲಿ ಭಯೋತ್ಪಾದಕರ ಕೃತ್ಯಗಳು, ದರೋಡೆ, ಬಲಾತ್ಕಾರ ಮೊದಲಾದ ಸಾಮಾನ್ಯವೆಂಬಂತಾಗಿದ್ದ ಸುದ್ದಿಗಳ ಜೊತೆಗೆ ಈಗ ಆತ್ಮಹತ್ಯೆಯಂತಹ ಸುದ್ದಿಗಳೂ ಸಹಜವೆನಿಸುವಂತೆ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ.
ಪೋಷಕರ ಅತಿಯಾದ ಮಹತ್ವಾಕಾಂಕ್ಷೆಗಳ ಜೊತೆಗೆ ಮಕ್ಕಳ ಮಾನಸಿಕ, ಬೌದ್ಧಿಕ ಸಾಮರ್ಥ್ಯವನ್ನು ಪರಿಗಣಿಸದೇ ಅನಗತ್ಯವಾದ ಒತ್ತಡವನ್ನು ಹೇರುವುದರಿಂದಾಗಿ ಮಕ್ಕಳು ಸಹ ಆತ್ಮಹತ್ಯೆಯಂತಹ ಕಠೋರ ಕ್ರಮಕ್ಕೆ ಮುಂದಾಗುತ್ತಿವೆ. ಆತ್ಮಹತ್ಯೆ ಮುಂದಿನ ದಿನಗಳಲ್ಲಿ ಒಂದು ಪಿಡುಗಾಗಿ ಸಮಾಜವನ್ನು ಕಾಡುವ ಸನ್ನಿವೇಶ ಬರುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ದಯಮಾಡಿ ಸರ್ಕಾರ - ಸಮಾಜದ ಚಿಂತಕರು ಮಕ್ಕಳ ಮನೋಸ್ಥೈರ್ಯವನ್ನು ಹೆಚ್ಚಿಸುವ ದಿಸೆಯಲ್ಲಿ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮನಸ್ಸು ಮಾಡಲಿ. ಮಕ್ಕಳ ಬಾಲ್ಯವನ್ನು ಸಹಜವಾಗಿ ಅನುಭವಿಸಲು ಬಿಟ್ಟರೆ ಎಷ್ಟೋ ಸಮಸ್ಯೆಗಳು ಪರಿಹಾರವಾಗಬಹುದು.