ಶ್ರೀರಂಗಪಟ್ಟಣ: ಸಾಲ ಬಾಧೆ ತಾಳಲಾರದೆ ವ್ಯಕ್ತಿಯೊಬ್ಬ ನಾಲ್ಕು ವರ್ಷದ ಮಗಳಿಗೆ ವಿಷ ಕುಡಿಸಿ, ತಾನೂ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಪಟ್ಟಣದಲ್ಲಿ ಭಾನುವಾರ ನಡೆದಿದೆ.
ಚಾಮರಾಜನಗರ ತಾಲ್ಲೂಕಿನ ರಾಮಸಮುದ್ರ ಗ್ರಾಮದ ರಂಗಣ್ಣನವರ ಮಗ ಸತೀಶ್, ಪುತ್ರಿ ಭಾವನಳಿಗೆ ವಿಷ ಕುಡಿಸಿ, ತಾನೂ ಕುಡಿದರು. ಮಗಳು ಸ್ಥಳದಲ್ಲೇ ಮೃತಪಟ್ಟರೆ, ಸತೀಶ್ ಬದುಕುಳಿದಿದ್ದು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷ ಕುಡಿದ ನಂತರ ಪಟ್ಟಣದ ಜಿಬಿ ಗೇಟ್ ಬಳಿಯ ಕಾವೇರಿ ನದಿಯ ಮಧ್ಯೆ ಇರುವ ಬಂಡೆಯ ಮೇಲೆ ಒದ್ದಾಡುತ್ತಿದ್ದ ಸತೀಶ್ ಅವರನ್ನು ಸ್ಥಳೀಯರು ಕರೆದೊಯ್ದು ಆಸ್ಪತ್ರೆಗೆ ದಾಖಸಿ ಪೊಲೀಸರಿಗೆ ವಿಷಯ ತಿಳಿಸಿದರು.
ರಾಮಸಮುದ್ರದಲ್ಲಿ ಟೈಲರ್ ಕೆಲಸ ಮಾಡುತ್ತಿದ್ದ ಸತೀಶ್ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಈ ಮೊದಲು ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಕಂಪೆನಿಗಳಲ್ಲಿ ಷೇರು ಹೂಡಿಕೆಯಲ್ಲಿ ತೊಡಗಿದ್ದರು. ಅದರಲ್ಲಿ ನಷ್ಟ ಅನುಭವಿಸಿದ ನಂತರ ಮದ್ಯ ವ್ಯಸನಿಯಾಗಿದ್ದರು. ವಿಷ ಕುಡಿಯುವ ಮುನ್ನ ಸತೀಶ್ `ನನ್ನ ಸಾವಿಗೆ ನಾನೇ ಕಾರಣ' ಎಂಬ ಪತ್ರ ಬರೆದಿಟ್ಟಿದ್ದಾರೆ. ಶನಿವಾರ ಪತ್ನಿಯ ತವರು ಮೈಸೂರಿಗೆ ಬಂದಿದ್ದ ಸತೀಶ್ ಭಾನುವಾರ ಬೆಳಿಗ್ಗೆ ಪುತ್ರಿಯ ಜೊತೆ ನಾಪತ್ತೆಯಾಗಿದ್ದರು.