ಬೆಂಗಳೂರು: `ಬೀದರ್ನ ಚೌಳಿಮಠದ ಮೂವರು ಕಿರಿಯ ಸ್ವಾಮೀಜಿಗಳ ಆತ್ಮಾಹುತಿ ಘಟನೆ ನಿಗೂಢವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.
ಸೋಮವಾರ ನಡೆದ ಬಿಜೆಪಿ ಸಂಕಲ್ಪ ಸಮಾವೇಶದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
`ಚೌಳಿಮಠದಲ್ಲಿ ಇತ್ತೀಚೆಗೆ ಸಂಭವಿಸಿದ ಸ್ವಾಮೀಜಿಯೊಬ್ಬರ ನಾಪತ್ತೆ ಪ್ರಕರಣ, ಹಿರಿಯ ಸ್ವಾಮೀಜಿ ಅವರ ದಿಢೀರ್ ನಿಧನ ಮತ್ತು ಇಂದಿನ ಮೂವರು ಕಿರಿಯ ಸ್ವಾಮೀಜಿಗಳ ಆತ್ಮಾಹುತಿ ಪ್ರಕರಣಗಳು ಸಂಶಯಾಸ್ಪದ ಘಟನೆಗಳಾಗಿವೆ. ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಸತ್ಯಾಂಶ ಬಯಲಿಗೆಳೆಯಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳಲಿದೆ' ಎಂದರು.
`ಮೇಲ್ನೋಟಕ್ಕೆ ಹಿರಿಯ ಸ್ವಾಮೀಜಿ ಗಾನೇಶ್ವರ ಅವಧೂತ ಸ್ವಾಮೀಜಿ ಅವರ ಅಗಲುವಿಕೆ ಸಹಿಸಲಾಗದೆ ಸ್ವಾಮೀಜಿಗಳು ಅತ್ಮಾಹುತಿ ಮಾಡಿಕೊಂಡರು ಎಂದು ಹೇಳಲಾಗುತ್ತಿದೆ. ಇದು ಲೌಕಿಕದಿಂದ ಮುಕ್ತರಾದ ಸನ್ಯಾಸಿಗಳಿಗೆ ಯುಕ್ತವಾದ ನಿಲುವು ಎನಿಸುವುದಿಲ್ಲ. ಸನ್ಯಾಸ ಜೀವನ ಎಂದರೆ ಪ್ರಾಪಂಚಿಕವಾದ ಸುಖ-ದುಃಖಗಳನ್ನು ಮೀರಿದ್ದಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮಾಹುತಿ ಘಟನೆ ಶೋಚನೀಯವಾಗಿದೆ' ಎಂದು ತಿಳಿಸಿದರು.
`ಇಂತಹ ಸಂದರ್ಭದಲ್ಲಿ ಮಠದ ಅನುಯಾಯಿಗಳು ಸಮಾಧಾನದಿಂದ ಇದ್ದು, ಶಾಂತಿ ಸುವ್ಯವಸ್ಥೆ ಕಾಪಾಡಬೇಕು' ಎಂದು ಮನವಿ ಮಾಡಿದರು.