ನವದೆಹಲಿ (ಪಿಟಿಐ): ಮುಂದಿನ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಈಗಿನ 1.6 ಲಕ್ಷ ರೂಪಾಯಿಗಳಿಂದ 1.8 ಲಕ್ಷ ರೂಪಾಯಿಗಳಿಗೆ (ರೂ.1,80,000 ಅಥವಾ 4000 ಡಾಲರ್) ಏರಿಸುವ ಪ್ರಸ್ತಾವವನ್ನು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮುಂದಿಟ್ಟಿದ್ದಾರೆ.
ಮುಂದಿನ ಹಣಕಾಸು ವರ್ಷಕ್ಕಾಗಿ (2011-12) ಕೇಂದ್ರ ಮುಂಗಡಪತ್ರವನ್ನು ಸಂಸತ್ತಿನಲ್ಲಿ ಮಂಡಿಸುತ್ತಾ ಮುಖರ್ಜಿ ಈ ಪ್ರಸ್ತಾವವನ್ನು ಪ್ರಕಟಿಸಿದರು.
ಏನಿದ್ದರೂ ಕಾರ್ಪೋರೇಟ್ ರಂಗದ ಮೇಲಿನ ಬದಲಿ ತೆರಿಗೆಯನ್ನು ಶೇಕಡಾ 18ರಿಂದ ಶೇಕಡಾ 18.5ಕ್ಕೆ ಏರಿಸಲಾಗಿದೆ. ಸರ್ಚಾರ್ಜನ್ನು ಶೇಕಡಾ 7.5ರಿಂದ ಶೇಕಡಾ 5ಕ್ಕೆ ಇಳಿಸಲಾಗಿದೆ.
80ಕ್ಕೆ ಹೆಚ್ಚು ವಯಸ್ಸಿನ ಅತ್ಯಂತ ಹಿರಿಯ ವೃದ್ಧರಿಗೆ 5 ಲಕ್ಷ ರೂಪಾಯಿಗಳವರೆಗಿನ ಆದಾಯಕ್ಕೆ ತೆರಿಗೆ ವಿನಾಯ್ತಿ ಮಿತಿಯನ್ನು ಹೆಚ್ಚಿಸುವ ಹೊಸ ಪ್ರಸ್ತಾವವನ್ನು ತಾವು ಮುಂದಿಡುತ್ತಿರುವುದಾಗಿ ಪ್ರಣವ್ ಹೇಳಿದರು. ಹಿರಿಯ ನಾಗರಿಕರ ವಿನಾಯ್ತಿಯ ಅರ್ಹತಾ ವಯೋಮಿತಿಯನ್ನು 65 ವರ್ಷಗಳಿಂದ 60 ವರ್ಷಗಳಿಗೆ ಇಳಿಸಲಾಗುವುದು ಎಂದು ಅವರು ನುಡಿದರು.