ಕೊಳ್ಳೇಗಾಲ: ಆದಿವಾಸಿಗಳ ಜೀವನೋ ಪಾಯಕ್ಕೆ ಸರ್ಕಾರ ನೀಡಿರುವ ಜಮೀನಿನ ಬೆಳೆ ರಕ್ಷಣೆಗೆ ಕಂದಕ ನಿರ್ಮಿಸದೆ ಕಡೆಗಣಿಸಿರುವ ಅರಣ್ಯ ಇಲಾಖೆ ಕ್ರಮವನ್ನು ಖಂಡಿಸಿ ವಿವಿಧ ಪೋಡುಗಳ ಆದಿವಾಸಿ ಸೋಲಿಗರು ಮಂಗಳವಾರ ಜೆಸಿಬಿ ಯಂತ್ರ ತಡೆದು ಪ್ರತಿಭಟನೆ ನಡೆಸಿದರು.
ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಡೆಕುರುಬನದೊಡ್ಡಿ, ಬಿ.ಜಿ. ಪೋಡುಗಳ 50 ಕುಟುಂಬಗಳಿಗೆ ಕಳೆದ 25 ವರ್ಷಗಳ ಹಿಂದೆಯೇ ಅರಣ್ಯ ಇಲಾಖೆ ವತಿಯಿಂದ ಕೃಷಿ ಚಟುವಟಿಕೆಗೆ ಭೂಮಿ ನೀಡಿ, ಹಕ್ಕುಪತ್ರ ಗಳನ್ನು ಸಹ ವಿತರಿಸಲಾಗಿತ್ತು. ಈ ಜಮೀನುಗಳಲ್ಲಿ ಸೋಲಿಗರು ಬೆಳೆದ ಬೆಳೆಗಳಿಗೆ ಕಾಡುಪ್ರಾಣಿಗಳಿಂದ ರಕ್ಷಣೆ ಇಲ್ಲದೆ ಸೋಲಿಗರು ನಷ್ಟ ಅನುಭವಿ ಸುತ್ತಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಕಂದಕ ನಿರ್ಮಿಸುವ ಮೂಲಕ ಪ್ರಾಣಿಗಳಿಂದ ಬೆಳೆ ರಕ್ಷಿಸುವಂತೆ ಹಲವಾರು ಬಾರಿ ಮನವಿ ಮಾಡಲಾಗಿತ್ತು.
ಅರಣ್ಯ ಇಲಾಖೆ ಅಧಿಕಾರಿಗಳು ಪಿ.ಜಿ. ಪಾಳ್ಯದಿಂದ ಗಡಿಭಾಗದ ಅರ್ಧನಾರೀಪುರದವರೆಗೆ ಕಂದಕ ನಿರ್ಮಾಣಕ್ಕೆ ಮುಂದಾಗಿ, ಆದಿವಾಸಿಗಳ ಜಮೀನಿಗೆ ಕಂದಕ ನಿರ್ಮಾಣ ಮಾಡದಿರುವುದನ್ನು ಖಂಡಿಸಿ ಈ ಕಂದಕ ನಿರ್ಮಾಣ ಕಾಮಗಾರಿಗೆ ಸೋಲಿಗ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಈ ಬಗ್ಗೆ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದಲ್ಲಿ 83 ಪೋಡುಗಳ ಆದಿವಾಸಿ ಸೋಲಿಗರು ಅರಣ್ಯ ಇಲಾಖೆ ಕ್ರಮದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ
ಪ್ರತಿಭಟನೆಯಲ್ಲಿ ಸೊಲಿಗ ಮುಖಂಡ ಮಾದೇಗೌಡ, ಗೌರಮ್ಮ, ಕು.ಮಾದನ್, ಮಾದಯ್ಯ, ಸಿದ್ದರಾಜಮ್ಮ, ಪುಟ್ಟಮಾದಯ್ಯ, ಜಡೆಯಪ್ಪ, ಮಾದೇವಿ, ಚಿನ್ನಮ್ಮ ಇದ್ದರು.