ನವದೆಹಲಿ: ಕುಮಾರಸ್ವಾಮಿ ಪರ್ವತ ಪ್ರದೇಶದ 380 ಹೆಕ್ಟೇರ್ನಲ್ಲಿ ಕಬ್ಬಿಣ ಅದಿರು ತೆಗೆಯುವ ಗಣಿಗಾರಿಕೆಗೆ ಅನುಮತಿ ಕೋರಿರುವ ಕಂಪೆನಿಗಳ ಅರ್ಜಿಗಳನ್ನು ನಾಲ್ಕು ತಿಂಗಳೊಳಗಾಗಿ ಪರಿಶೀಲಿಸಲು ಕರ್ನಾಟಕ ಸರ್ಕಾರಕ್ಕೆ ನೀಡಿದ್ದ ಆದೇಶವನ್ನು ಪರಾಮರ್ಶಿಸಬೇಕು ಎಂಬ ಮನವಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಳ್ಳಿಹಾಕಿದೆ.
2010ರ ಸೆ. 13ರಂದು ಹೊರಡಿಸಿದ್ದ ಆದೇಶ ಪರಾಮರ್ಶಿಸಬೇಕು ಎಂಬ ಕೇಂದ್ರ ಸರ್ಕಾರ ಮತ್ತು ಇತರರ ಮನವಿಯನ್ನು ನ್ಯಾಯಮೂರ್ತಿ ಪಿ. ಸದಾಶಿವಂ ಮತ್ತು ಎಚ್. ಎಲ್. ದತ್ತು ಅವರನ್ನು ಒಳಗೊಂಡ ನ್ಯಾಯಪೀಠವು ತಳ್ಳಿಹಾಕಿದೆ.
ಮೊದಲು ನೀಡಿದ ತೀರ್ಪು ಅಥವಾ ಆದೇಶದಲ್ಲಿ ದೊಡ್ಡ ಪ್ರಮಾಣದ ಪ್ರಮಾವಾಗಿದ್ದರೆ ಮಾತ್ರ ತೀರ್ಪು ಪರಾಮರ್ಶೆ ಅರ್ಜಿಯನ್ನು ಪರಿಶೀಲಿಸಬಹುದಾಗಿದೆ. ಆದರೆ ಪ್ರಸಕ್ತ ಪ್ರಕರಣದಲ್ಲಿ ಅಂತಹ ಪ್ರಮಾದವೇನೂ ಜರುಗಿಲ್ಲ. ಆದ್ದರಿಂದ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.