ನರಸಿಂಹರಾಜಪುರ: ಖಾಸಗಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡಿರುವ ಕೃಷಿ ಇಲಾಖೆಗೆ ಸೇರಿದ ಜಾಗವನ್ನು ತೆರವುಗೊಳಿಸುವಂತೆ ನ್ಯಾಯಾಲಯ ಆದೇಶ ನೀಡಿದ್ದರೂ ಅದನ್ನು ತೆರವುಗೊಳಿಸದಿರುವ ವಿಚಾರ ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಗುರುವಾರ ನಡೆದ ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ನಿಲೇಶ್, ಕೃಷಿ ಇಲಾಖೆಗೆ ಬಹಳ ಹಿಂದೆಯೇ 2ಎಕರೆ ಜಾಗ ಮಂಜೂರಾಗಿದೆ. ಇದನ್ನು ಖಾಸಗಿ ವ್ಯಕ್ತಿ ಅತಿಕ್ರಮಿಸಿದ್ದು ತಹಶೀಲ್ದಾರರು ಕೂಡಲೇ ತೆರವುಗೊಳಿಸಬೇಕು. ತೆರವುಗೊಳಿಸಲು ಸಾಧ್ಯವಾಗದಿದ್ದರೆ ಇದಕ್ಕೆ ಕಾರಣವನ್ನು ಬರವಣಿಗೆಯಲ್ಲಿ ನೀಡಬೇಕು. ಇದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಹೇಳಿದರು.
ತಾಲ್ಲೂಕಿನ ನಾಗಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ 49ರಲ್ಲಿ ಆಶ್ರಯ ನಿವೇಶನಕ್ಕೆಂದು ಗುರುತಿಸಲಾಗಿರುವ ಕಂದಾಯ ಇಲಾಖೆಯ ಜಾಗವನ್ನು ಅರಣ್ಯ ಇಲಾಖೆ ತನಗೆ ಸೇರಿದ್ದೆಂದು ಹೇಳುತ್ತಿದೆ ಎಂದು ತಹಶೀಲ್ದಾರ್ ಜೆ.ಕೃಷ್ಣಮೂರ್ತಿ ಸಭೆಗೆ ತಿಳಿಸಿದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಅಧ್ಯಕ್ಷ ಜೆ.ಜಿ.ನಾಗರಾಜ್, ಅರಣ್ಯ ಇಲಾಖೆ ಕಂದಾಯ ಇಲಾಖೆ ಜಾಗದಲ್ಲಿ ನೆಡು ತೋಪು ಬೆಳೆಸಿದೆ. ಇದು ಕಟಾವಾದ ಕೂಡಲೇ ಎಲ್ಲ ಜಾಗವನ್ನು ಕಂದಾಯ ಇಲಾಖೆ ತನ್ನ ವಶಕ್ಕೆ ತೆಗೆದುಕೊಂಡು ಆಶ್ರಯ ನಿವೇಶಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸೂಚಿಸಿದರು. ಕಾನೂರು ಮತ್ತು ಆಡುವಳ್ಳಿ ಗ್ರಾಮದಲ್ಲಿ ಆಶ್ರಯ ಬಡಾವಣೆಗೆ ಹೊಸ ನಿವೇಶನ ಗುರುತಿಸಲಾಗಿದೆ ಎಂದು ತಹಶೀಲ್ದಾರ್ ಸಭೆಗೆ ಮಾಹಿತಿ ನೀಡಿದರು.
ಸರ್ಕಾರಿ ಮದ್ಯ ಮಾರಾಟ ಅಂಗಡಿ (ಎಂಎಸ್ ಐಲ್) ನಲ್ಲಿ ಇತ್ತೀಚೆಗೆ ಸಂಭವಿಸಿದ ಬೆಂಕಿ ಆಕಸ್ಮಿಕದಿಂದಾಗಿ ಬಾಗಿಲು ಮುಚ್ಚಿದ್ದು, 15 ದಿನಕಳೆದರೂ ಪುನಃ ಪ್ರಾರಂಭಿಸದಿರುವ ಬಗ್ಗೆ ನಿಲೇಶ್, ಅಧ್ಯಕ್ಷ ನಾಗರಾಜ್ ಅಸಮಧಾನ ವ್ಯಕ್ತಪಡಿಸಿದರು. ಹಿಂದೆ ಸ್ಥಳ ಪರಿಶೀಲನೆ ನಡೆಸಿಯೇ ಮದ್ಯದ ಅಂಗಡಿ ಪ್ರಾರಂಭಿಸಲು ಪರವಾನಿಗೆ ನೀಡಲಾಗಿತ್ತು. ಈಗ ಜನವಸತಿ ಪ್ರದೇಶವೆಂದು ಪ್ರಾರಂಭಿಸಲು ಅನುಮತಿ ನೀಡದಿರುವ ಹಿಂದೆ ಖಾಸಗಿ ಮಾರಾಟಗಾರರ ಲಾಬಿ ಇದೆಯೇ ಎಂದು ಅಬಕಾರಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಒಂದು ಹಂತದಲ್ಲಿ ಖಾಸಗಿ ಅವರ ಲಾಬಿ ಇದೇ ಎಂದ ಅಧಿಕಾರಿ ನಂತರ ಈ ಬಗ್ಗೆ ಮಾಹಿತಿ ಇಲ್ಲ ಎಂದು ಉತ್ತರಿಸಿದರು. ಇನ್ನೊಂದು ವಾರದೊಳಗೆ ಈ ಬಗ್ಗೆ ತಾಲ್ಲೂಕು ಪಂಚಾಯಿತಿಗೆ ಕಾರಣ ನೀಡುವಂತೆ ಅಧಿಕಾರಿಗೆ ಸೂಚಿಸಲಾಯಿತು.
ಕೆಲವು ಶಿಕ್ಷಕರು ಸಾರ್ವಜನಿಕರ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿರುವ ದೂರುಗಳು ಬಂದಿದೆ ಎಂಬ ವಿಷಯ ಸಭೆಯಲ್ಲಿ ಚರ್ಚೆಗೆ ಕಾರಣವಾಯಿತು. ಇದಕ್ಕೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಮೇಶ್ ಶಾಲಾ ಅವಧಿಯ ಸಂದರ್ಭದಲ್ಲಿ ಶಿಕ್ಷಕರು ಮದ್ಯಪಾನ ಮಾಡಿದ್ದು ಕಂಡು ಬಂದರೆ ತಕ್ಷಣವೇ ಸೇವೆಯಿಂದ ಅಮಾನತು ಮಾಡಲಾಗುವುದು. ಶಾಲಾ ಅವಧಿ ಮುಗಿದ ನಂತರ ಮದ್ಯಪಾನ ಮಾಡಿದ ದೂರುಗಳು ಬಂದರೆ ಎಚ್ಚರಿಕೆ ನೀಡುವ ಕೆಲಸ ಮಾಡಲಾಗುವುದು ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜೆ.ಜಿ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸುಜಾತಾ, ತಾಲ್ಲೂಕು ಕಾರ್ಯಇಒ ಜಗದೀಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.