ಜಯಪುರ (ಬಾಳೆಹೊನ್ನೂರು): ಕೊಪ್ಪ ತಾಲ್ಲೂಕಿನ ಜಯಪುರ ಪಟ್ಟಣದಲ್ಲಿ ಆಧಾರ್ ನೋಂದಣಿ ಕೇಂದ್ರ ಆರಂಭಿಸುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿರುವುದನ್ನು ವಿರೋಧಿಸಿ ಸೆ 30 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಎಸ್ಟೇಟ್ ಲೇಬರ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಪಿ.ಪಿ.ಎಸ್.ಮಣಿ ತಿಳಿಸಿದ್ದಾರೆ.
ಮೇಗುಂದಾ ಹೋಬಳಿ ಸುಮಾರು 24 ಗ್ರಾಮಗಳನ್ನು ಒಳಗೊಂಡಿದ್ದು, ಅಧಿಕ ಜನಸಂಖ್ಯೆ ಹೊಂದಿದೆ. ತಾಲ್ಲೂಕು ಕೇಂದ್ರಕ್ಕೆ ಜನ ತೆರಳಿ ಆಧಾರ್ ನೊಂದಣಿ ಮಾಡಿಸುವುದು ಕಷ್ಟಕರವಾದ ಹಿನ್ನೆಲೆಯಲ್ಲಿ ಜಯಪುರ ಪಟ್ಟಣದಲ್ಲೆ ಆಧಾರ್ ಕೇಂದ್ರ ಆರಂಭಿಸಲು ಕೋರಿ ಮುಖ್ಯಮಂತ್ರಿಗಳಿಗೆ, ಉಸ್ತುವಾರಿ ಸಚಿವರಿಗೆ ಮತ್ತು ಜಿಲ್ಲಾಡಳಿತಕ್ಕೆ ಲೇಬರ್ ಯೂನಿಯನ್ ಕಳೆದ ತಿಂಗಳ 6ರಂದು ಮನವಿ ಸಲ್ಲಿಸಿತ್ತು.
ಮನವಿಗೆ ಸ್ಪಂದಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ತಕ್ಷಣ ಕೋರಿಕೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಕಳೆದ ಆ.12ರಂದು ಪತ್ರದ ಮೂಲಕ ಸೂಚಿಸಿದ್ದರು.
ಆದರೆ ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯದಿಂದ ಇದುವರೆಗೂ ಆಧಾರ್ ನೋಂದಣಿ ಕೇಂದ್ರ ತೆರೆಯಲು ಸಾಧ್ಯವಾಗಿಲ್ಲ. ಇದನ್ನು ವಿರೋದಿಸಿ ಇದೇ 30ರಂದು ಮೇಗುಂದಾ ಹೋಬಳಿಯ ಸಮಸ್ತ ಗ್ರಾಮಸ್ಥರು, ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಹಾಗೂ ಕಾರ್ಮಿಕ ಸಂಘಟನೆಯ ಎಲ್ಲಾ ಸದಸ್ಯರು ಒಗ್ಗೂಡಿ ಜಯಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.