ದಾವಣಗೆರೆ: ಇಲ್ಲಿನ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಈಚೆಗೆ `ಬಾಳೆ ಬೆಳೆಯ ಬೇಸಾಯ ಹಾಗೂ ಕೊಯ್ಲೋತ್ತರ ತಾಂತ್ರಿಕತೆ~ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ದಾವಣಗೆರೆ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸೈಯದ್ ಮನ್ಸೂರ್ ಪಾಷಾ ಮಾತನಾಡಿ, ಜಿಲ್ಲೆಯಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಕಾರ್ಯಕ್ರಮದ ಅಡಿ ಬಾಳೆಯನ್ನು ಹೊನ್ನಾಳಿ, ದಾವಣಗೆರೆ, ಹರಿಹರ ತಾಲ್ಲೂಕಿನಲ್ಲಿ ಬೆಳೆಯಲಾಗಿದೆ. ಪ್ರಸ್ತುತ ಬೆಳೆಗೆ 3 ತಿಂಗಳಾಗಿದ್ದು, ಉತ್ತಮವಾಗಿದೆ. ಕಾರ್ಯಾಗಾರದಲ್ಲಿ ಬಾಳೆಯ ಬಗ್ಗೆ ಉತ್ತಮ ತಾಂತ್ರಿಕತೆಗಳನ್ನು ಪರಿಚಯಿಸಲಾಗುತ್ತಿದೆ. ಅದರ ಸದುಪಯೋಗವನ್ನು ಬೆಳೆಗಾರರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಸಿಇಒ ಎ.ಬಿ. ಹೇಮಚಂದ್ರ ಮಾತನಾಡಿ, ರೈತರು ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಆಧುನಿಕ ತಾಂತ್ರಿಕತೆ ಬಳಸಿದರೆ ಉತ್ತಮ ಇಳುವರಿ ಪಡೆದುಕೊಳ್ಳಬಹುದು. ರೋಗ ಹಾಗೂ ಕೀಟಗಳ ಹಾವಳಿ ತಡೆಯಲು ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ. ಅದನ್ನು ನಾವು ಸರಿಯಾದ ಸಮಯದಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಭಾರತೀಯ ತೋಟಗಾರಿಕೆ ಕೇಂದ್ರದ ಪ್ರಧಾನ ವಿಜ್ಞಾನಿ ಡಾ.ಸುಧಾಕರ್ ರಾವ್ ಮಾತನಾಡಿ, ರಸಾಯನಿಕ ಬಳಕೆ ಮಾಡದೇ ಅತೀ ಕಡಿಮೆ ವೆಚ್ಚದಲ್ಲಿ ಫಾಲಿಥೀನ್ ಹಾಳೆಯ ಗೂಡಿನಲ್ಲಿ ಸ್ವಲ್ಪಪ್ರಮಾಣದ ಎಥಿಲಿನ್ ಬಳಸಿ ಹಣ್ಣು ಮಾಗಿಸಬಹುದು ಎಂದು ಹೇಳಿದರು.
ಬಾಳೆ ಬೆಳೆಯಲ್ಲಿ ಅನುಸರಿಸುವ ಆಧುನಿಕ ತಂತ್ರಜ್ಞಾನಗಳಾದ ಕಂದುಗಳ ಆಯ್ಕೆ, ನೀರು ಮತ್ತು ಗೊಬ್ಬರ ನಿರ್ವಹಣೆ, ನಾಟಿ ವಿಧಾನ ಮುಂತಾದ ವಿಷಯದ ಬಗ್ಗೆ ಕೇಂದ್ರದ ತೋಟಗಾರಿಕಾ ತಜ್ಞ ಎಂ.ಜಿ. ಬಸವನಗೌಡ ಉಪನ್ಯಾಸ ನೀಡಿದರು.
ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಪ್ರಸನ್ನಕುಮಾರ್ ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಪಡಾಕ್ಷರಪ್ಪ, ಡಾ.ಟಿ.ಎನ್. ದೇವರಾಜ್, ಡಾ.ಉಮಾಶಂಕರ್ ಮಿರ್ಜಿ ಇದ್ದರು.