ಲಖನೌ: ಮಹಾಭಾರತದಲ್ಲಿ ಯುಧಿಷ್ಠರ ಕೌರವರ ಜತೆ ಜೂಜಾಡಿ ಎಲ್ಲವನ್ನೂ ಸೋತ ನಂತರ ಪತ್ನಿ ದ್ರೌಪದಿಯನ್ನು ಪಣಕ್ಕಿಟ್ಟಂತೆ ಕಲಿಯುಗದ ಯುಧಿಷ್ಠರನೊಬ್ಬ ಹೆಂಡತಿಯನ್ನು ಪಣಕ್ಕಿಟ್ಟು ಸೋತ ಘಟನೆ ಉತ್ತರಪ್ರದೇಶದ ಬಾಗಪತ್ ಜಿಲ್ಲೆಯ ದೌಲಾ ಗ್ರಾಮದಲ್ಲಿ ನಡೆದಿದೆ.
ಜೂಜಾಟದಲ್ಲಿ ಸಾವಿರಾರು ರೂಪಾಯಿ ಕಳೆದುಕೊಂಡು ಬರಿಗೈ ದಾಸನಾದ ಮೇಲೆ ಸ್ನೇಹಿತರ ಸಲಹೆಯಂತೆ ಹೆಂಡತಿಯನ್ನೇ ಪಣಕ್ಕಿಟ್ಟ ಈ ಜೂಜುಕೋರ!
ನಂತರ ಹೆಂಡತಿಯನ್ನು ಜೂಜಾಟದಲ್ಲಿ ಗೆದ್ದವರ ಜತೆ ಕಳುಹಿಸಲು ನಿರಾಕರಿಸಿದಾಗ ಗಲಾಟೆಯಾಗಿ ಹಳ್ಳಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ಕೂಡಲೇ ಊರ ಹಿರಿಯರು ಪಂಚಾಯ್ತಿ ಮಾಡಿ ವಾತಾವರಣವನ್ನು ತಿಳಿಗೊಳಿಸಿದರು.
ಗಂಡ ಜೂಜಾಟದಲ್ಲಿ ಪಣಕ್ಕಿಟ್ಟ ವಿಚಾರ ಹೆಂಡತಿಗೆ ಗೊತ್ತಿರಲಿಲ್ಲ, ಆದ್ದರಿಂದ ಮಹಿಳೆಯನ್ನು ಜೂಜಾಟದಲ್ಲಿ ಗೆದ್ದವರ ಜತೆ ಕಳುಹಿಸುವ ಪ್ರಶ್ನೆಯೇ ಬರುವುದಿಲ್ಲ ಎಂದು ಪಂಚಾಯ್ತಿ ತೀರ್ಮಾನ ನೀಡಿದ್ದರಿಂದ ದ್ರೌಪದಿ ಅನುಭವಿಸಿದ ಕಷ್ಟವನ್ನು ಅನುಭವಿಸುವುದು ಈ ಮಹಿಳೆಗೆ ತಪ್ಪಿತು.
ಆದರೆ ಹೆಂಡತಿಯನ್ನು ಪಣಕ್ಕಿಟ್ಟ ತಪ್ಪಿಗಾಗಿ ರಮೇಶ್ ಕುಮಾರ್ಗೆ ಪಂಚಾಯ್ತಿ ಒಂದು ಲಕ್ಷ ದಂಡ ವಿಧಿಸಿದ್ದು, ಈ ಹಣವನ್ನು ಜೂಜಾಟದಲ್ಲಿ ಗೆದ್ದವರಿಗೆ ಒಂದು ವಾರದಲ್ಲಿ ನೀಡುವಂತೆ ಆದೇಶಿಸಿದ್ದಾರೆ.