ಯಲಬುರ್ಗಾ: ಆಧ್ಯಾತ್ಮ ಹಾಗೂ ಧಾರ್ಮಿಕ ಚಟುವಟಿಕೆಯಲ್ಲಿ ನಿರತರಾಗುವ ಮೂಲಕ ಮಾನಸಿಕ ನೆಮ್ಮದಿ ಕಂಡುಕೊಳ್ಳುವುದರ ಜೊತೆಗೆ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಿದೆ.ಆಗ ಮಾತ್ರ ಉತ್ತಮ ನಾಗರಿಕ ಸಮಾಜ ನಿರ್ಮಾಣಗೊಳ್ಳುತ್ತದೆ ಎಂದು ಸಂಸ್ಥಾನ ಹಿರೇಮಠದ ಪೀಠಾಧಿಕಾರಿ ಸಿದ್ಧರಾಮೇಶ್ವರ ಸ್ವಾಮೀಜಿ ಭಾನುವಾರ ಇಲ್ಲಿ ಹೇಳಿದರು.
ಸ್ಥಳೀಯ ಶ್ರೀಧರಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿಯವರ ಒಂಬತ್ತನೇ ಪೀಠಾಧಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅನುಕರಣೀಯರಾದ ಬಸವಲಿಂಗೇಶ್ವರ ಸ್ವಾಮೀಜಿಯವರ ತತ್ವ- ಸಿದ್ಧಾಂತಗಳನ್ನು ಪಾಲಿಸುವುದು ಅಗತ್ಯ ಎಂದು ಹೇಳಿದರು.
ಪಟ್ಟಣ ಪಂಚಾಯತಿ ಅಧ್ಯಕ್ಷ ಸುರೇಶಗೌಡ ಶಿವನಗೌಡ್ರ ಮಾತನಾಡಿ, ಸಾಂಸ್ಕೃತಿಕ ಘಟಕ ಎಂದೇ ಕರೆಯಿಸಿಕೊಳ್ಳುತ್ತಿರುವ ಸ್ಥಳೀಯ ಮಠಗಳು ಕೇವಲ ಧರ್ಮ ಸಂರಕ್ಷಣೆ ಕೆಲಸ ಮಾಡದೇ ಸಾಮಾಜಿಕ ಕಳಕಳಿಯನ್ನು ಹೊಂದಿವೆ. ಮಠದಲ್ಲಿ ನಡೆಯುವ ಪುರಾಣ ಪ್ರವಚನ ಕಾರ್ಯಗಳು ಸಾರ್ವಜನಿಕರಲ್ಲಿ ಧಾರ್ಮಿಕ ಮನೋಭಾವ ಬೆಳೆಸುವಲ್ಲಿ ಯಶಸ್ವಿಯಾಗುತ್ತಿವೆ ಎಂದರು.
ಬೇನಾಳದ ಸದಾಶಿವ ಮಹಾಂತ ಸ್ವಾಮೀಜಿ, ಜಿಗೇರಿಯ ಸಿದ್ದೇಶ್ವರ ಸ್ವಾಮೀಜಿ, ಬದಾಮಿಯ ಶಿವಪುತ್ರ ಸ್ವಾಮೀಜಿ ಹಾಗೂ ಸೋಲಾಪುರದ ಪ್ರಭುದೇವ ಸ್ವಾಮೀಜಿ ಪಾಲ್ಗೊಂಡಿದ್ದರು. ನವೀನ ಗುಳಗಣ್ಣವರ್, ಸಿ.ಎಚ್. ಪೊಲೀಸ್ ಪಾಟೀಲ್, ವೀರನಗೌಡ ಮಾತನಾಡಿದರು.