`ನನಗೆ ಪ್ರಜ್ವಲ್ರನ್ನು ನೋಡಿ ಹೊಟ್ಟೆಕಿಚ್ಚಾಗುತ್ತಿದೆ. ಮೂವರು ಮುದ್ದಾದ ಹುಡುಗಿಯರ ಜೊತೆ ರೊಮ್ಯಾನ್ಸ್ ಮಾಡುವ ಸೌಭಾಗ್ಯ ಅವರದು. ಛೇ! ನಾನೇ ಅವರಾಗಬಾರದಿತ್ತೇ ಎಂದೆನಿಸುತ್ತಿದೆ~ - ಜೋರಾಗಿ ನಕ್ಕರು ನಟಿ ಸಂಜನಾ.
ಈ ಮಾತನ್ನು ಪ್ರಜ್ವಲ್ ಕೂಡ ಒಪ್ಪಿಕೊಂಡರು. ಮೂವರು ನಟಿಯರ ಜೊತೆ ನಟಿಸಿ ಹಲವರ ಹೊಟ್ಟೆಯುರಿಗೆ ಕಾರಣನಾಗಿದ್ದೇನೆ. ಅದಕ್ಕಾಗಿಯೇ ತಾವು ಲಕ್ಕಿ ಎಂದು ಹೇಳಿಕೊಂಡರು. ಈ ಮಾತುಕತೆ ನಡೆದದ್ದು `ಸಾಗರ್~ ಚಿತ್ರದ ಗೀತೆಗಳ ದನಿಮುದ್ರಿಕೆ ಬಿಡುಗಡೆ ಸಮಾರಂಭದಲ್ಲಿ. ನಟ ದರ್ಶನ್, ನಿರ್ದೇಶಕ ದಿನಕರ್, ನಟಿ ಮಾಲಾಶ್ರೀ ಸಮಾರಂಭದ ಅತಿಥಿಗಳು.
ಹಾಡುಗಳು ಚೆನ್ನಾಗಿವೆ. ಚಿತ್ರದ ಪ್ರೋಮೊ ನೋಡಿದಾಗಲೇ ಇದು ಲವ್ ಮತ್ತು ಆ್ಯಕ್ಷನ್ ಬೆರೆತ ಕೌಟುಂಬಿಕ ಮನರಂಜನೆಯ ಚಿತ್ರ ಎಂಬುದು ಅರಿವಾಗುತ್ತದೆ ಎಂದರು ಸೀಡಿ ಬಿಡುಗಡೆ ಮಾಡಿದ ನಟ ದರ್ಶನ್. ಅವರ ಮಾತುಗಳು ಹೆಚ್ಚಾಗಿ ನಿರ್ಮಾಪಕ ರಾಮು ಅವರ ಕುರಿತು ಸಾಗಿತ್ತು.
ಚಿತ್ರದಲ್ಲೆಲ್ಲೂ ಹಾಡು ಸುಖಾಸುಮ್ಮನೆ ಎದುರಾಗುವುದಿಲ್ಲ. ಸನ್ನಿವೇಶದ ಅಗತ್ಯಕ್ಕೆ ಅನುಗುಣವಾಗಿ ಹಾಡುಗಳನ್ನು ಅಳವಡಿಸಲಾಗಿದೆ. ಪ್ರತಿ ಹಾಡೂ ಅದ್ದೂರಿತನದಿಂದ ಕೂಡಿದೆ ಎಂದರು ನಿರ್ದೇಶಕ ಎಂ.ಡಿ.ಶ್ರೀಧರ್. `ಸಾಗರ್~ನ ಪ್ರಮುಖ ಸನ್ನಿವೇಶಗಳನ್ನು ಸಾಗರದಾಚೆಗಿನ ನಾಡಿನಲ್ಲೇ ಸೆರೆಹಿಡಿಯಲಾಗಿದೆ ಎಂದ ಅವರು ಒಂದು ವರ್ಷದ ಪರಿಶ್ರಮದ ಬಗ್ಗೆ ಹೇಳಿಕೊಂಡರು.
`ಸಾಗರ್~ ತಮಗೆ ದೊಡ್ಡ ಬ್ರೇಕ್ ನೀಡಲಿದೆ ಎಂಬ ಭರವಸೆ ನಟ ಪ್ರಜ್ವಲ್ ದೇವರಾಜ್ಗೆ. ನಿರ್ದೇಶಕ ಶ್ರೀಧರ್ ಜೊತೆ ಇದು ಅವರ ಎರಡನೇ ಚಿತ್ರ. ಮತ್ತೊಂದು ಚಿತ್ರ `ಗಲಾಟೆ~ ಚಿತ್ರೀಕರಣ ಹಂತದಲ್ಲಿದೆ. ಅವರೊಂದಿಗೆ ಕೆಲಸ ಮಾಡುವುದು ಖುಷಿ ಕೊಡುತ್ತದೆ.
ಆರಂಭದಲ್ಲಿ ಮುಜುಗರ ಇತ್ತು. ಈಗ ಅವರ ಬಳಿ ಮುಕ್ತವಾಗಿ ಚರ್ಚಿಸುತ್ತೇನೆ ಎಂದರು. ತಮ್ಮ ಮೊದಲ ಚಿತ್ರ `ಸಿಕ್ಸರ್~ ಸಂದರ್ಭದಲ್ಲಿ ಇದ್ದ ಆತಂಕಗಳನ್ನು ತೊಲಗಿಸಿ ಆದಿ ಲೋಕೇಶ್ ಧೈರ್ಯ ತುಂಬಿದ್ದರು ಎಂದು ನೆನಪಿಸಿಕೊಂಡರು.
ನಟಿ ಹರಿಪ್ರಿಯಾರಲ್ಲಿ ಮಾತನ್ನಾಡಲು ಹೆಚ್ಚಿನ ವಿಷಯಗಳಿರಲಿಲ್ಲ. ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿರುವುದನ್ನು ಅವರು ಖುಷಿಯಿಂದ ಹೇಳಿಕೊಂಡರು. ರಾಮು ಎಂದಿನ ಅದ್ದೂರಿತನದಲ್ಲಿ ಚಿತ್ರ ನಿರ್ಮಿಸಿದ್ದಾರೆ ಎಂದು ಹೊಗಳಿಕೆ ಮಳೆ ಸುರಿಸಿದರು ಸಂಗೀತ ನಿರ್ದೇಶಕ ಗುರುಕಿರಣ್. ಒಂದು ದೃಶ್ಯವನ್ನೇ ಹಾಡನ್ನಾಗಿಸಿದ ಬಗೆಯನ್ನು ಅವರು ಹೇಳಿಕೊಂಡರು.
ಗುರುಕಿರಣ್ರ ಎಲ್ಲಾ ಸಂಗೀತಕ್ಕೂ ಪದಗಳನ್ನು ಜೋಡಿಸಿರುವುದು ಸಿನಿ ಸಾಹಿತಿ ಕವಿರಾಜ್. ಯುವಸಮೂಹ ಇಷ್ಟಪಡುವ ಗೀತೆಗಳನ್ನು ನೀಡಿದ್ದೇವೆ ಎಂದವರು ಹೇಳಿದರು.
ಅಶ್ವಿನಿ ಆಡಿಯೊದ ಪ್ರಸಾದ್, ನಟ ಆದಿ ಲೋಕೇಶ್ ಮುಂತಾದವರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.