ಮುದ್ದೇಬಿಹಾಳ: ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಎ.ಎಂ. ಬಾರಕೇರ ಅವರ ಮೇಲೆ ಹಲ್ಲೆ ಮಾಡಿ, ಕರ್ತವ್ಯ ನಿರ್ವಹಣೆಗೆ ಅಡ್ಡಿ ಮಾಡಿದ ಆನಂದ ಲಮಾಣಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕ ಸರ್ವಾನುಮತದ ತೀರ್ಮಾನ ಕೈಗೊಂಡಿದೆ.
ತಹಶೀಲ್ದಾರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ತಹಶೀಲ್ದಾರ ಸೋಮಲಿಂಗಪ್ಪ ಗೆಣ್ಣೂರ, ಸರ್ಕಾರಿ ನೌಕರರಿಗೆ ನೆಮ್ಮದಿಯಿಂದ ಕೆಲಸ ಮಾಡಲು ಕೆಲವರು ಬಿಡುತ್ತಿಲ್ಲ, ನೌಕರರು ಸರಿಯಾಗಿ ಕೆಲಸ ಮಾಡಲು, ಅವರಿಗೆ ಸೂಕ್ತ ರಕ್ಷಣೆ, ಮಾನಸಿಕ ಸ್ಥೈರ್ಯ ತುಂಬುವದು ಅವಶ್ಯಕವಾಗಿದೆ ಎಂದರು.
ಲೋಕೋಪಯೋಗಿ ಇಲಾಖೆಯ ಬಾರಕೇರ ಅವರ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ ಪ್ರದರ್ಶಿಸಿದ ಲಮಾಣಿ ಅವರನ್ನು ಪೊಲೀಸರು ಬಂಧಿಸಿ ಅಗತ್ಯ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದರು.
ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಆರ್. ಕಟ್ಟಿಮನಿ, ಲೋಕೋಪಯೋಗಿ ಇಲಾಖೆಯ ಸೆಕ್ಶನ್ ಆಫೀಸರ್ ಹಿರೇಗೌಡರ, ತಾ.ಪಂ. ಪಿಡಿಒ ಅಯ್ಯಪ್ಪ ಅವರ ಮೇಲೆ ಹಲ್ಲೆ ನಡೆದಿರುವುದನ್ನು ಖಂಡಿಸಿದರು.
ತಾ.ಪಂ ಇ.ಒ. ಎಸ್.ಜಿ. ಕಕ್ಕಳಮೇಲಿ. ಸಿ.ಪಿ.ಐ. ವಿಠ್ಠಲ ಏಳಗಿ, ಜಿ.ಪಂ. ಎಂಜಿನಿಯರ್ ಪಿ.ಎಚ್.ಮ್ಯಾಗಿನಮನಿ, ಹೂಗಾರ, ಪುರಸಭೆ ಮುಖ್ಯಾಧಿಕಾರಿ ಎಸ್.ಬಿ.ಹೊನ್ನಳ್ಳಿ, ಎನ್.ಜೆ.ಜಗ್ಗಲ, ಕುಂಬಾರ, ಎಸ್.ಬಿ. ಚೌಧರಿ, ಎಸ್.ಬಿ. ಚಲವಾದಿ, ಎಸ್.ಎಂ. ಪಾಟೀಲ ಪಾಲ್ಗೊಂಡಿದ್ದರು.