ಬೆಳ್ತಂಗಡಿ: ಆನೆಗಳ ಸಂರಕ್ಷಣೆಗಾಗಿ ಸರ್ಕಾರ ಆನೆ ಕಾರಿಡಾರ್ ಯೋಜನೆಗೆ ಅನುಮತಿ ನೀಡಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ.
ಬೆಳ್ತಂಗಡಿ ತಾಲ್ಲೂಕಿನ ನೆರಿಯಾ, ಪುದುವೆಟ್ಟು, ಕಳೆಂಜ, ಶಿಶಿಲ, ಶಿಬಾಜೆ, ಅರಸಿನಮಕ್ಕಿ ಗ್ರಾಮಗಳು ಆನೆ ಕಾರಿಡಾರ್ ಯೋಜನೆಗೆ ಸೇರ್ಪಡೆಯಾಗುವ ಸಾಧ್ಯತೆ ಇದ್ದು ಜನರು ತೀವ್ರ ಆತಂಕದಲ್ಲಿದ್ದಾರೆ.
ತೀವ್ರ ವಿರೋಧದ ಬಳಿಕ ಪುಷ್ಪಗಿರಿ ವನ್ಯಧಾಮ ಯೋಜನೆ ಸದ್ಯಕ್ಕೆ ತಣ್ಣಗಾಗಿದ್ದು ಆನೆ ಕಾರಿಡಾರ್ ಯೋಜನೆಯಿಂದ ಸಾವಿರಾರು ಮಂದಿ ಕೃಷಿಕರು ತಮ್ಮ ಕೃಷಿಭೂಮಿ ಹಾಗೂ ಕುಮ್ಕಿ ಜಾಗವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಹೋರಾಟ ಸಮಿತಿ ರಚನೆ: ಶಾಸಕ ಕೆ.ವಸಂತ ಬಂಗೇರ ನೇತೃತ್ವದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷರಾಗಿರುವ ತಾಲ್ಲೂಕು ಮಟ್ಟದ ಹೋರಾಟ ಸಮಿತಿಯನ್ನು ರಚಿಸಲಾಗಿದೆ. ಗ್ರಾಮ ಮಟ್ಟದಲ್ಲಿ ಕೂಡ ಹೋರಾಟ ಸಮಿತಿ ರಚಿಸಿ ಪ್ರತಿಭಟನೆಗೆ ಸಿದ್ಧತೆಗಳು ನಡೆಯುತ್ತಿವೆ.