ಕನಕಪುರ: ಕಾಡಿಗೆ ತೆರಳುವ ಮಾರ್ಗದಲ್ಲಿದ್ದ ಕಾಡಾನೆಗಳು ವ್ಯಕ್ತಿಯೊಬ್ಬನನ್ನು ತುಳಿದು ಸಾಯಿಸಿದ ಘಟನೆ ತಾಲ್ಲೂಕಿನ ಕೋಡಿಹಳ್ಳಿ ಅರಣ್ಯ ವಲಯ ವ್ಯಾಪ್ತಿಯ ಕೂತಗಳೆ ಬಳಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.
ಮೃತ ವ್ಯಕ್ತಿಯನ್ನು ಕೋಡಿಹಳ್ಳಿ ಹೋಬಳಿಯ ಕೂತಗಳೆ ಗ್ರಾಮದ ಲಿಂಗೇಗೌಡರ ಮಗ ಸುರೇಶ್(43) ಎಂದು ಗುರುತಿಸಲಾಗಿದೆ.
ಮಾರಸಂದ್ರ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿದ್ದ ಎರಡು ಆನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಂಜೆ ಕಾಡಿಗೆ ಅಟ್ಟುವ ಪ್ರಯತ್ನ ನಡೆಸಿದ್ದರು. ಆಗ ಸ್ಥಳದಿಂದ ಕಾಲ್ಕಿತ್ತ ಪುಂಡಾನೆಗಳು ಕೂತಗಳೆ ಗ್ರಾಮದ ಮಾರ್ಗವಾಗಿ ಹೋಗುತ್ತಿದ್ದಾಗ ದಾರಿಯಲ್ಲಿ ಅಡ್ಡ ಸಿಕ್ಕ ಸುರೇಶ್ ಮೇಲೆ ದಾಳಿ ನಡೆಸಿವೆ. ಆನೆಯು ಈ ದಾಳಿ ನಡೆಸಿದ್ದು ಕಾಲಿನಿಂದ ತುಳಿದು ಸಾಯಿಸಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.