ಕೊಳ್ಳೇಗಾಲ: ಅಕ್ರಮವಾಗಿ ಆನೆ ದಂತ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಬೆಂಗಳೂರು ಅರಣ್ಯ ಸಂಚಾರ ದಳದ ಸಿಐಡಿ ಪೊಲೀಸರು ಭಾನುವಾರ ಬಂಧಿಸಿ ಆತನಿಂದ 2 ದಂತಗಳನ್ನು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡು ಧರ್ಮಪುರಿಯ ಕೃಷ್ಣ ಬಂಧಿತ ಆರೋಪಿ.
ಆನೆ ದಂತ ಕಳ್ಳಸಾಗಣೆ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಅರಣ್ಯ ಸಂಚಾರದಳ ಸಿಐಡಿ ಪೊಲೀಸ್ ಇನ್ಸ್ಪೆಕ್ಟರ್ ಮಾಲತೇಶ್, ಸಬ್ ಇನ್ಸ್ಪೆಕ್ಟರ್ ಇಬ್ರಾಹಿಂ ಒಂದು ವಾರದಿಂದ ರಾಮಾಪುರ ಸುತ್ತಮುತ್ತ ಮಾರುವೇಷದಲ್ಲಿ ಮೊಕ್ಕಾಂ ಹೂಡಿದ್ದರು.
ಭಾನುವಾರ ಬೆಳಿಗ್ಗೆ ಮಲೆಮಹದೇಶ್ವರ ಬೆಟ್ಟದ ರಸ್ತೆಯ ಒಡಿಕೆಹಳ್ಳದ ಬಳಿ ಆನೆದಂತ ಸಾಗಿಸುತ್ತಿದ್ದ ಕೃಷ್ಣನನ್ನು ಬಂಧಿಸಿದರು. ಪ್ರಕರಣವನ್ನು ಮುಂದಿನ ಕ್ರಮಕ್ಕಾಗಿ ರಾಮಾಪುರ ಪೊಲೀಸ್ ಇನ್ಸ್ಪೆಕ್ಟರ್ ಕರೀಂ ರಾವುತರ್ ಅವರಿಗೆ ವರ್ಗಾಯಿಸಲಾಗಿದೆ.