ಸಕಲೇಶಪುರ: ಕಾಡಾನೆ ತುಳಿದು ಕಾರ್ಮಿಕ ಮೃತಪಟ್ಟ ಘಟನೆ ತಾಲ್ಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ನಹಳ್ಳಿ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಚಿಕ್ಕಲ್ಲೂರು ಗ್ರಾಮ ವಾಸಿ ದೊಡ್ಡಯ್ಯ (43) ಮೃತ ದುರ್ದೈವಿ.
ಕೊತ್ನಹಳ್ಳಿ ಹರೀಶ್ ಎಂಬುವರ ಕಾಫಿ ತೋಟದಲ್ಲಿದ್ದ ದೊಡ್ಡಯ್ಯ ಅವರ ಮೇಲೆ ಒಂಟಿ ಸಲಗ ದಿಢೀರ್ ದಾಳಿ ನಡೆಸಿತು. ಇವರೊಂದಿಗೆ ಇದ್ದ ಇತರ 8 ಮಂದಿ ಕಾರ್ಮಿಕರು ಆನೆಯಿಂದ ತಪ್ಪಿಸಿಕೊಂಡು ಓಡಿಹೋದರು.
ಆದರೆ ದೊಡ್ಡಯ್ಯ ಮಾತ್ರ ತಪ್ಪಿಸಿಕೊಳ್ಳಲು ಆಗಲಿಲ್ಲ. ದೊಡ್ಡಯ್ಯ ಅವರಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.
10 ವರ್ಷಗಳಿಂದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ನಹಳ್ಳಿ, ಚಿಕ್ಕಲ್ಲೂರು, ದೊಡ್ಡಕಲ್ಲೂರು, ಐಗೂರು, ಯಡಕೇರಿ ಸುತ್ತಲಿನ ಗ್ರಾಮಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಕಾಡಾನೆಗಳು ವಾಸ್ತವ್ಯ ಹೂಡಿವೆ.
ಇವುಗಳ ದಾಳಿಗೆ ಈಗಾಗಲೇ 15ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 20ಕ್ಕೂ ಹೆಚ್ಚು ಮಂದಿ ಅಂಗವಿಕಲಾಗಿದ್ದಾರೆ.
ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಣ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರೇಗೌಡ ಭೇಟಿ ನೀಡಿದರು.