ಬಂಗಾರಪೇಟೆ: ತಮಿಳುನಾಡು ಗಡಿಗೆ ಹೊಂದಿಕೊಂಡಂತಿರುವ ಸಾವಿರಾರು ಎಕರೆ ವಿಸ್ತೀರ್ಣದ ದಟ್ಟಡವಿಯ ಮೂಲಕ ತಾಲ್ಲೂಕಿನ ಕಾಮಸಮುದ್ರದ ವಲಯಕ್ಕೆ ಬಂದಿರುವ 27 ಆನೆಗಳಿರುವ ಹಿಂಡಿಗೆ ಸಿಲುಕಿ ತಾಲ್ಲೂಕಿನ ಚಿಕ್ಕಬೊಮ್ಮನಹಳ್ಳಿಯ ನಿವಾಸಿ ಸೋಮವಾರ ರಾತ್ರಿ ಬಲಿಯಾಗಿದ್ದಾರೆ. ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ನಾಗಭೂಷಣರೆಡ್ಡಿ (35) ಮೃತ ವ್ಯಕ್ತಿ. ಶ್ರೀರಾಮರೆಡ್ಡಿ (37) ತೀವ್ರವಾಗಿ ಗಾಯಗೊಂಡಿದ್ದಾರೆ. ರಾತ್ರಿ ಸುಮಾರು 9.30ರ ಸಮಯದಲ್ಲಿ ಗ್ರಾಮದ ಭಡೇಶ್ವರಿ ಸ್ತ್ರೀಶಕ್ತಿ ಸಂಘದ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಡಾನೆಗಳು ಒಮ್ಮೆಲೆ ಊರಿಗೆ ನುಗ್ಗಿವೆ. ಆಗ ಗ್ರಾಮಸ್ಥರು ಓಡಿದ್ದಾರೆ. ಗದ್ದಲಕ್ಕೆ ಬೆದರಿದ ಆನೆಗಳು ಚೆಲ್ಲಾಪಿಲ್ಲಿಯಾಗಿ ಓಡಿವೆ. ಎದುರು ಸಿಕ್ಕಿದ ನಾಗಭೂಷಣರೆಡ್ಡಿ ಅವರನ್ನು ಆನೆಯೊಂದು ಸೊಂಡಿಲಿನಿಂದ ಎತ್ತೊಗೆದಿದೆ. ಪ್ರಜ್ಞಾಶೂನ್ಯರಾಗಿದ್ದ ಅವರನ್ನುಆಸ್ಪತ್ರೆಗೆ ತುರ್ತುಚಿಕಿತ್ಸೆಗೆ ದಾಖಲು ಮಾಡಿದರೂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.