ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ಪಥ ತೆರವುಗೊಳಿಸಿ

Last Updated 27 ಮೇ 2012, 19:30 IST
ಅಕ್ಷರ ಗಾತ್ರ

ಕಾಡುಗಳ್ಳ ವೀರಪ್ಪನ್ ಹತ್ಯೆ ನಂತರ ರಾಜ್ಯದಲ್ಲಿ ಆನೆಗಳನ್ನು ದಂತಕ್ಕಾಗಿ ಕೊಲ್ಲುವ ಪ್ರವೃತ್ತಿ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಈಗ ರಾಜ್ಯದಲ್ಲಿ ಅವುಗಳ ಸಂತತಿ ಹೆಚ್ಚಾಗಿದೆ ಎಂಬುದು ಆನೆ ಗಣತಿಯ ಪ್ರಾಥಮಿಕ ವರದಿಗಳಿಂದ ದೃಢಪಟ್ಟಿದೆ.

ಈ ಬೆಳವಣಿಗೆ ಪರಿಸರ ಹಾಗೂ ಪ್ರಾಣಿ ಪ್ರಿಯರಿಗೆ ಸಂತೋಷ ಉಂಟುಮಾಡುವ ಸಂಗತಿಯಾದರೂ ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಆನೆ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಲೇ ಇದೆ. ಕಳೆದ ಒಂದು ದಶಕದಲ್ಲಿ ಆನೆಗಳು ಆಹಾರ ಹುಡುಕಿಕೊಂಡು ಊರುಗಳತ್ತ ಬರುವ ಪ್ರಕರಣಗಳು ಹೆಚ್ಚಾಗಿವೆ.
 
ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಕಾಡಂಚಿನ ಹಳ್ಳಿಗಳೇ ಅಲ್ಲದೆ ಮೈಸೂರು, ಬೆಂಗಳೂರು ಹೊರವಲಯದವರೆಗೂ ಆನೆಗಳು ಹಿಂಡುಗಳಲ್ಲಿ ಬರುತ್ತಿವೆ. ಹಾಸನ, ಚಿಕ್ಕಮಗಳೂರು, ಕೊಡಗು, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ.

ಕಬ್ಬು, ಭತ್ತ, ಬಾಳೆ ಇತ್ಯಾದಿ ಬೆಳೆಗಳನ್ನು ತಿಂದು, ತುಳಿದು ನಾಶಪಡಿಸುವುದಲ್ಲದೆ ಅಡ್ಡಬಂದವರನ್ನೂ ತುಳಿದು ಸಾಯಿಸಿದ ಪ್ರಕರಣಗಳಿಗೆ ಕೊನೆಯೇ ಇಲ್ಲ. ಆನೆಗಳು ಜನವಸತಿ ಪ್ರದೇಶಗಳತ್ತ ಬರುವುದಕ್ಕೆ ಕಾರಣವೇನು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಸಾವಿರಾರು ವರ್ಷಗಳಿಂದ ಕಾಡಿನಲ್ಲಿ ಆನೆಗಳು ಓಡಾಡಿಕೊಂಡಿದ್ದ ಸಹಜ ಮಾರ್ಗಗಳ ಅತಿಕ್ರಮಣ ಆಗಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಬಂಡೀಪುರ, ನಾಗರಹೊಳೆ  ಅಭಯಾರಣ್ಯಗಳ ಪ್ರದೇಶದಲ್ಲೂ ರೆಸಾರ್ಟ್‌ಗಳು ತಲೆ ಎತ್ತಿವೆ.

ರಸ್ತೆ, ರೈಲು ಮಾರ್ಗ, ಶಾಲೆ, ಆಸ್ಪತ್ರೆ, ಗಣಿಗಾರಿಕೆ ಹೆಸರಿನಲ್ಲಿ ಮತ್ತು ಸಾಗುವಳಿಗಾಗಿ ಸಾವಿರಾರು ಎಕರೆ ಆಯಕಟ್ಟಿನ ಅರಣ್ಯ ಭೂಮಿ ಒತ್ತುವರಿಯಾಗಿದೆ. ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಅರಣ್ಯಗಳ ನಡುವೆ ಆನೆಗಳು ಓಡಾಡಿಕೊಂಡಿದ್ದ ಮಾರ್ಗಗಳು ಮುಚ್ಚಿಹೋಗಿವೆ.

ಆನೆಗಳ ಸಂಚಾರ ಮಾರ್ಗಗಳ ನಡುವೆ ಆಗಿರುವ ಭೂ ಒತ್ತುವರಿಯನ್ನು ತೆರವುಗೊಳಿಸುವಂತೆ  ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಿದೆ. ಒತ್ತುವರಿ ತೆರವಿಗೆ ಗಡುವು ನೀಡಿದ್ದರೂ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆನೆಗಳು ಬೆಳೆ ನಾಶ ಮಾಡುವುದನ್ನು ತಪ್ಪಿಸಲು ರೈತರೇ ಕೈಗೆತ್ತಿಕೊಂಡ ಅವೈಜ್ಞಾನಿಕ ಕ್ರಮಗಳಿಗೆ ಆನೆಗಳು ಬಲಿಯಾಗುತ್ತಿವೆ.

ವಿದ್ಯುತ್ ಬೇಲಿ ಹಾಕಿ ಆನೆಗಳನ್ನು ನಿಯಂತ್ರಿಸುವ, ವಿಷ ಹಾಕಿ ಕೊಲ್ಲುವ ಪ್ರಯತ್ನಗಳೂ ನಡೆಯುತ್ತಿವೆ. ಆನೆಗಳ ದಾಳಿ ನಡೆದಾಗಲೆಲ್ಲ ಸರ್ಕಾರ ಅದನ್ನು ತಡೆಯುವ ಕಾಳಜಿಯನ್ನು ವ್ಯಕ್ತಪಡಿಸುತ್ತದೆ.

ಆದರೆ ಅದು ಕಾರ್ಯರೂಪಕ್ಕೆ ಬರುವುದಿಲ್ಲ. ಪ್ರಾಣ ಹಾನಿ ಮತ್ತು ಬೆಳೆ ನಷ್ಟದ ಪ್ರಕರಣಗಳಲ್ಲಿ ಸಂಬಂಧಪಟ್ಟವರಿಗೆ ಇಂತಿಷ್ಟು ಹಣದ ಪರಿಹಾರ ಕೊಡುವುದನ್ನು ಬಿಟ್ಟರೆ ಸರ್ಕಾರ ಬೇರೇನನ್ನೂ ಮಾಡುತ್ತಿಲ್ಲ. ಇಂತಹ ಕ್ರಮಗಳಿಂದ ಆನೆ- ಮಾನವ ಸಂಘರ್ಷ ಕೊನೆಯಾಗುವುದಿಲ್ಲ.

ಆನೆಗಳ ಸಂಚಾರ ಮಾರ್ಗಗಳ ಒತ್ತುವರಿ  ತೆರವುಗೊಳಿಸುವುದೇ ಸದ್ಯಕ್ಕಿರುವ ಪರಿಹಾರ. ಇಲ್ಲವಾದರೆ ಆನೆ ಹಾಗೂ ಮಾನವ ಸಂಘರ್ಷ ಇನ್ನಷ್ಟು ಹೆಚ್ಚುತ್ತದೆ. ಆನೆಗಳ ಸಂತತಿ ಹೆಚ್ಚಾಗಿರುವುದರಿಂದ ಮುಂದಿನ ದಿನಗಳಲ್ಲಿ ಅವು ಊರುಗಳತ್ತ ಬರುವುದೂ ಹೆಚ್ಚುತ್ತದೆ. ಸರ್ಕಾರ ಈಗ ಕಣ್ಣುಮುಚ್ಚಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT