ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ಹಾವಳಿ ತಡೆಗೆ ಕ್ಷಿಪ್ರ ಕಾರ್ಯ ಪಡೆ

ಐದು ಜಿಲ್ಲೆಗಳಲ್ಲಿ ಶೀಘ್ರ ಕಾರ್ಯಾರಂಭ
Last Updated 3 ಸೆಪ್ಟೆಂಬರ್ 2013, 6:32 IST
ಅಕ್ಷರ ಗಾತ್ರ

ಬೆಂಗಳೂರು: ಮನುಷ್ಯನ ವಾಸಸ್ಥಳಕ್ಕೆ ನುಗ್ಗಿ ಪುಂಡಾಟ ನಡೆಸುವ ಆನೆಗಳನ್ನು ಮರಳಿ ಕಾಡಿಗೆ ಅಟ್ಟಲು ಐದು ಜಿಲ್ಲಾ ಕೇಂದ್ರಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ಆರಂಭವಾಗಲಿದೆ. ಆನೆಗಳ ಹಾವಳಿ ಹೆಚ್ಚಿರುವ ಮೈಸೂರು, ಚಾಮರಾಜನಗರ, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಇದು ಕಾರ್ಯ ಆರಂಭಿಸಲಿದೆ. ಈ ಪಡೆಗೆ ಎಲ್ಲ ರೀತಿಯ ಆಧುನಿಕ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ.

ಅಲ್ಲದೆ, ಆನೆ ಕಾರಿಡಾರ್‌ಗಳಲ್ಲಿ ವಿದ್ಯುತ್ ತಂತಿಯು ನೆಲದಿಂದ ಕನಿಷ್ಠ 20 ಅಡಿ ಎತ್ತರದಲ್ಲಿರುವಂತೆ ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳು ನಿಗಾ ವಹಿಸಲಿವೆ. ಇನ್ನು ಆರು ತಿಂಗಳಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ. ವಿದ್ಯುತ್ ಕಳ್ಳತನ ತಡೆಯಲು ಸಂಚಾರಿ ದಳಗಳನ್ನು ಸಜ್ಜುಗೊಳಿಸಲಾಗಿದೆ.

ಆನೆಗಳ ಅಸಹಜ ಸಾವಿನ ಕುರಿತು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ (ಪಿಐಎಲ್) ವಿಚಾರಣೆ ವೇಳೆ, ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠಕ್ಕೆ ಸರ್ಕಾರ ಈ ವಿಷಯವನ್ನು ಸೋಮವಾರ ತಿಳಿಸಿದೆ.

`ವಲಯ ಅರಣ್ಯ ಅಧಿಕಾರಿಗಳು (ಆರ್‌ಎಫ್‌ಒ) ಮತ್ತು ಅದಕ್ಕಿಂತ ಕೆಳಗಿನ ಹುದ್ದೆಗಳನ್ನು ಭರ್ತಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಹಣಕಾಸು ವರ್ಷದ ಅಂತ್ಯದ ವೇಳೆ ಖಾಲಿ ಹುದ್ದೆಗಳು ಭರ್ತಿಯಾಗಿರುತ್ತವೆ. ಆನೆಗಳು ಮನುಷ್ಯನ ವಸತಿ ಪ್ರದೇಶಕ್ಕೆ ನುಗ್ಗದಂತೆ ತಡೆಯುವ ಕಾಲುವೆಗಳನ್ನು 2014ರ ಮುಂಗಾರು ಆರಂಭಕ್ಕೆ ಮುನ್ನವೇ ನಿರ್ಮಾಣ ಮಾಡಲಾಗುತ್ತದೆ' ಎಂದು ಸರ್ಕಾರದ ಪರವಾಗಿ ವಕೀಲ ರವೀಂದ್ರ ಜಿ. ಕೊಲ್ಲೆ ಪೀಠಕ್ಕೆ ತಿಳಿಸಿದರು.

`ಆನೆಗಳು ದಾಳಿ ನಡೆಸಿದಾಗ, ಮನುಷ್ಯನ ಜೀವ ಮತ್ತು ಆಸ್ತಿ ಕಾಪಾಡಲು ಸಹಾಯವಾಣಿ ಮಾದರಿಯ ವ್ಯವಸ್ಥೆ ಬೇಕು' ಎಂದು ಪೀಠ ಹೇಳಿತು. `ಇಂಥದೊಂದು ವ್ಯವಸ್ಥೆ ಈಗಾಗಲೇ ಇದೆ.

ದೂರವಾಣಿ ಕರೆ ಸ್ವೀಕರಿಸಿದ 12 ಗಂಟೆಗಳಲ್ಲಿ, ನಮ್ಮ ತಂಡ ಘಟನಾ ಸ್ಥಳದಲ್ಲಿರುತ್ತದೆ' ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಇದರಿಂದ ಸಮಾಧಾನಗೊಳ್ಳದ ಪೀಠ, `12 ಗಂಟೆ ಸಮಯ ತೆಗೆದುಕೊಂಡರೆ ಆನೆ ಇನ್ನೊಂದು ಕಡೆ ಹೋಗಿರುತ್ತದೆ. ಕರೆ ಸ್ವೀಕರಿಸಿದ ನಾಲ್ಕು ಗಂಟೆ ಒಳಗೆ ನಿಮ್ಮ ಸಿಬ್ಬಂದಿ ಅಲ್ಲಿರುವಂತೆ ಕ್ರಮ ಕೈಗೊಳ್ಳಿ' ಎಂದು ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT