ಮುಂಡಗೋಡ: ಕಾಡಾನೆಗಳ ಹಿಂಡು ಭತ್ತದ ಗದ್ದೆಗೆ ನುಗ್ಗಿ ಭತ್ತದ ಸಸಿಯನ್ನು ತುಳಿದು ಹಾನಿ ಮಾಡಿದ ಘಟನೆ ತಾಲ್ಲೂಕಿನ ಗುಂಜಾವತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬುಧವಾರ ಜರುಗಿದೆ.
ಗುಂಜಾವತಿ ಭಾಗದ ಕಳಕಿಕೇರಾ ಹಾಗೂ ಗೋದನಾಳ ಗ್ರಾಮದ ಹೊಲಗದ್ದೆಗಳಿಗೆ ಆರು ಕಾಡಾನೆಗಳ ಹಿಂಡು ಬೆಳಗಿನ ಜಾವ ನುಗ್ಗಿ ಭತ್ತವನ್ನು ತಿಂದು ಅಡ್ಡಾದಿಡ್ಡಿ ನಡೆದು ಹಾನಿ ಮಾಡಿವೆ. ಕಾಡಾನೆಗಳ ಹಿಂಡಿನಲ್ಲಿ ಒಂದು ಮರಿ ಆನೆ ಇದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಳೆದ 2–3 ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ತತ್ತರಿಸಿರುವ ರೈತರಿಗೆ ಈ ವರ್ಷವಾದರೂ ಉತ್ತಮ ಮಳೆಯಿಂದ ಬೆಳೆದ ಬೆಳೆ ಕೈಗೆ ಸಿಗಲಿ ಎಂದು ಬಯಸುತ್ತಿರುವಾಗಲೇ ಕಾಡಾನೆಗಳು ಭತ್ತದ ಗದ್ದೆಗಳತ್ತ ನುಗ್ಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಅರಣ್ಯ ಸನಿಹದ ಹೊಲಗದ್ದೆಗಳಿಗೆ ಕಾಡಾನೆಗಳು ಬಂದು ಬೆಳೆಯನ್ನು ಹಾಳು ಮಾಡುವುದರಿಂದ ಅತಿಕ್ರಮಣ ರೈತರಿಗೆ ಬೆಳೆಹಾನಿಯಾದ ಬಗ್ಗೆ ಪರಿಹಾರವೂ ದೊರಕುವುದಿಲ್ಲ ಎಂದು ಅತಿಕ್ರಮಣದಾರ ರೈತರು ಅಸಹಾಯಕತೆಯಿಂದ ಹೇಳುತ್ತಾರೆ.
ಪ್ರತಿವರ್ಷ ಕಾಡಾನೆಗಳು ಕೊಯ್ಲಿಗೆ ಬರುವ ಸಂದರ್ಭದಲ್ಲಿ ದಾಳಿ ಮಾಡುತ್ತಿದ್ದವು. ಈ ವರ್ಷ ಭತ್ತ ತೆನೆ ಬಿಡುವ ಸಂದರ್ಭದಲ್ಲಿಯೇ ಕಾಡಾನೆ ಗಳು ದಾಳಿ ಮಾಡಿರುವುದು ರೈತರನ್ನು ಮತ್ತಷ್ಟು ಚಿಂತೆಗೀಡುಮಾಡಿವೆ.