ಬೆಂಗಳೂರು: ಕಟ್ಟೆಪುರ - ಆಲೂರಿನ ಹೇಮಾವತಿ ನದಿ ಹಿನ್ನೀರು ಪ್ರದೇಶದಲ್ಲಿರುವ 25 ಆನೆಗಳನ್ನು ಸ್ಥಳಾಂತರಿಸುವ ಬದಲು, ಒಂದೆಡೆ ಹಿಡಿದಿಡುವುದು ಎಷ್ಟರಮಟ್ಟಿಗೆ ಪ್ರಯೋಜನಕಾರಿ ಎಂದು ಹೈಕೋರ್ಟ್ ಬುಧವಾರ ಪ್ರಶ್ನಿಸಿತು.
ಪ್ರಕರಣವೊಂದರ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ, `ವಿದ್ಯುತ್ ತಗುಲಿ ಆನೆಗಳು ಸಾಯದಂತೆ ವಿದ್ಯುತ್ ನಿಗಮಗಳು ಯಾವ ಕ್ರಮ ಕೈಗೊಂಡಿವೆ~ ಎಂದು ಪ್ರಶ್ನಿಸಿತು.
`ಆನೆಗಳ ಹಾವಳಿ ಹೆಚ್ಚಿರುವ ಸ್ಥಳದಲ್ಲಿ ಗಸ್ತು ಆರಂಭಿಸಲಾಗಿದೆ. ಆದರೆ ವಿದ್ಯುತ್ ತಂತಿಗಳು ಆನೆಗಳಿಗೆ ನಿಲುಕದಂತೆ ಮಾಡಲು ಎಷ್ಟು ಎತ್ತರದ ಕಂಬಗಳನ್ನು ಹಾಕಬೇಕು ಎಂಬ ಬಗ್ಗೆ ನಮಗೆ ಯಾವುದೇ ಸೂಚನೆ ಇಲ್ಲ~ ಎಂದು ಅಧಿಕಾರಿಗಳು ನ್ಯಾಯಪೀಠಕ್ಕೆ ತಿಳಿಸಿದರು.
ವಿದ್ಯುತ್ ಶಾಕ್ ತಗುಲಿ ಆನೆ ಸಾವನ್ನಪ್ಪಿದರೆ, ವಿದ್ಯುತ್ ಪ್ರಸರಣ ನಿಗಮಗಳ ಕೆಳ ಹಂತದ ಅಧಿಕಾರಿಗಳ ಮೇಲೆ ಮೊಕದ್ದಮೆ ದಾಖಲಿಸಬಹುದು ಎಂದು ವಕೀಲ ಬಿ.ಆರ್. ದೀಪಕ್ ತಿಳಿಸಿದರು. ವಿಚಾರಣೆಯನ್ನು ಮುಂದೂಡಲಾಗಿದೆ.