ಆನೇಕಲ್: ಜಿಗಣಿ ಕೈಗಾರಿಕಾ ಪ್ರದೇಶದ ಹೈಕಲ್ ಎಂಬ ಔಷಧ ತಯಾರಿಕಾ ಕಂಪನಿಯಲ್ಲಿ ಬೆಳಗಿನ ಜಾವ ಅಗ್ನಿ ದುರಂತ ಸಂಭವಿಸಿ ಅಂದಾಜು ಒಂದು ಕೋಟಿ ರೂ.ಗೂ ಹೆಚ್ಚಿನ ನಷ್ಟ ವಾಗಿದೆ.
ಕಾರ್ಖಾನೆಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬಾಯ್ಲರ್ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿಯ ಕೆನ್ನಾಲಿಗೆ ಕಾರ್ಖಾನೆಯ ಪ್ಲಾಂಟ್ನ ಬಹುಭಾಗವನ್ನು ಆವರಿಸಿದ್ದರಿಂದ ಬೆಲೆಬಾಳುವ ಯಂತ್ರಗಳು ಹಾಗೂ ಕಟ್ಟಡ ಸುಟ್ಟು ಕರಕಲಾಗಿದೆ.
ಮುಂಜಾನೆ ಐದರ ವೇಳೆಗೆ ಅಗ್ನಿ ದುರಂತ ಸಂಭವಿಸಿದ್ದರಿಂದ ಕಾರ್ಖಾನೆಯಲ್ಲಿ ಕಾರ್ಮಿಕರಾರೂ ಇರಲಿಲ್ಲ. ಹಾಗಾಗಿ ಹೆಚ್ಚಿನ ದುರಂತ ಸಂಭವಿಸಿಲ್ಲ. ಎಂಟು ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ತ್ವರಿತವಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು. ಆನೇಕಲ್ ಪೊಲೀಸ್ ವೃತ್ತ ನಿರೀಕ್ಷಕ ಹೆಚ್.ಎಸ್.ವೆಂಕಟೇಶ್, ಬನ್ನೇರುಘಟ್ಟ ಪೊಲೀಸ್ ಠಾಣೆಯ ಪಿಎಸ್ಐ ವಿಶ್ವನಾಥ್ ಸ್ಥಳಕ್ಕೆ ಭೇಟಿ ನೀಡಿದ್ದರು.