ಬೆಂಗಳೂರು: ಬಡತನ ರೇಖೆಗಿಂತ ಮೇಲಿನ ಮಟ್ಟದಲ್ಲಿ ಇರುವ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಪಡಿತರ ಚೀಟಿಯನ್ನು ಆನ್ಲೈನ್ ಮೂಲಕ ವಿತರಿಸುವ ವ್ಯವಸ್ಥೆಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದು ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವೆ ಶೋಭಾ ಕರಂದ್ಲಾಜೆ ಇಲ್ಲಿ ಶುಕ್ರವಾರ ಹೇಳಿದರು.
ಈ ವ್ಯವಸ್ಥೆಯ ಅಡಿ ಅರ್ಜಿದಾರರು ತಮ್ಮ ಕಂದಾಯ ದಾಖಲೆ ಹಾಗೂ ವಿದ್ಯುತ್ ಸಂಖ್ಯೆ ಸೇರಿದಂತೆ ಇತರ ಮಾಹಿತಿಗಳನ್ನು ಆನ್ಲೈನ್ ಮೂಲಕ ನಮೂದು ಮಾಡಿ ಪಡಿತರ ಚೀಟಿಗೆ ಹೆಸರು ನಮೂದು ಮಾಡಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.ನಗರದ ಸಿವಿಲ್ ಕೋರ್ಟ್ನಲ್ಲಿ ಬೆಂಗಳೂರು ವಕೀಲರ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ರಾಜ್ಯದಲ್ಲಿ ಸುಮಾರು 1.15 ಕೋಟಿ ಕುಟುಂಬಗಳು ಪಡಿತರ ಚೀಟಿ ಪಡೆಯಲು ಅರ್ಹರು. ಆದರೆ ಇಲ್ಲಿಯವರೆಗೆ ಸುಮಾರು 1.75 ಚೀಟಿಗಳು ವಿತರಣೆಯಾಗಿವೆ. ಇದರ ಅರ್ಥ ಸುಮಾರು 60 ಲಕ್ಷ ಜನರು ಅಕ್ರಮವಾಗಿ ಇದನ್ನು ಪಡೆದುಕೊಂಡಿದ್ದಾರೆ~ ಎಂದು ಅವರು ಅಂಕಿ ಅಂಶ ನೀಡಿದರು.
ಯುವ ವಕೀಲರಿಗೆ ನೀಡುವ ಪ್ರೋತ್ಸಾಹ ಧನದ ಬಿಡುಗಡೆ ಹಾಗೂ ವಕೀಲರಿಗೆ ಅಗತ್ಯ ಇರುವ ಕಟ್ಟಡಗಳಿಗೆ ಹಣ ಮಂಜೂರು ಮಾಡುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವುದಾಗಿ ಅವರು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕೆ.ಎನ್.ಪುಟ್ಟೇಗೌಡ ಹಾಗೂ ಇತರ ಪದಾಧಿಕಾರಿಗಳು ಇದ್ದರು.