ನವದೆಹಲಿ (ಪಿಟಿಐ): ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ಮತ್ತು ಪ್ರಶಾಂತ್ ಭೂಷಣ್ ಅವರು ಮಾಡಿರುವ ಆರೋಪಗಳು ಆಧಾರ ರಹಿತವಾಗಿದ್ದು, ಅವು `ಸಂಪೂರ್ಣ ಸುಳ್ಳು, ಮಾನನಷ್ಟಕರ~ವಾಗಿವೆ ಎಂದು ಭಾನುವಾರ ಹೇಳಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ಇದು `ಅಗ್ಗದ ಪ್ರಚಾರ~ಕ್ಕಾಗಿ ತಮ್ಮ ಹಾಗೂ ಕುಟುಂಬದ ವಿರುದ್ಧ ಮಾಡಿರುವ ಅಪಪ್ರಚಾರ ಎಂದಿದ್ದಾರೆ.
ಡಿಎಲ್ಎಫ್ ನಿರ್ಮಾಣ ಸಂಸ್ಥೆ ಜತೆಗೂಡಿ ವಾದ್ರಾ ಅವರು ಭೂ ಖರೀದಿಯಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆಸಿದ್ದಾರೆ ಎಂಬ ಕೇಜ್ರಿವಾಲ್ ಅವರು ಇತ್ತೀಚಿಗೆ ಮಾಡಿದ ಆರೋಪ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದ ಹಿನ್ನೆಲೆಯಲ್ಲಿ ಭಾನುವಾರ ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾದ್ರಾ ಅವರು `ನಾನು ಕಳೆದ 21 ವರ್ಷಗಳಿಂದ ಖಾಸಗಿ ಉದ್ಯಮಗಳಲ್ಲಿ ತೊಡಗಿಕೊಂಡಿದ್ದು, ತಮ್ಮ ವಿರುದ್ಧ ಕೇಜ್ರಿವಾಲ್ ಮತ್ತು ಭೂಷಣ್ ಮಾಡಿರುವ ಆರೋಪಗಳು ಆಧಾರ ರಹಿತವಾಗಿವೆ~ ಎಂದು ಹೇಳಿದರು.
`ಉದ್ದೇಶಪೂರ್ವಕವಾಗಿ ನನ್ನ ಹಣಕಾಸು ಹೇಳಿಕೆಗಳಲ್ಲಿನ ಸಂಖ್ಯೆಗಳನ್ನು ತಪ್ಪಾಗಿ ತಿಳಿಸುವ ಮೂಲಕ ಸುಳ್ಳುಗಳನ್ನು ಸೃಷ್ಟಿಸಿರುವ ಕೇಜ್ರಿವಾಲ್ ಮತ್ತು ಭೂಷಣ್ ಅವರು ತಮ್ಮ ರಾಜಕೀಯ ಪಕ್ಷಕ್ಕೆ ಅಗ್ಗದ ಪ್ರಚಾರ ಪಡೆಯುವ ನಿಟ್ಟಿನಲ್ಲಿ ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಅಪಪ್ರಚಾರದ ಯತ್ನ ನಡೆಸಿದ್ದು ಇದರಿಂದ ನನಗೆ ತೀವ್ರ ನೋವುಂಟಾಗಿದೆ~ ಎಂದು ವಾದ್ರಾ ತಿಳಿಸಿದರು.
`ಕಾನೂನಿನಡಿಯಲ್ಲಿ ನಡೆಸಿರುವ ನನ್ನ ಸಂಪೂರ್ಣ ವ್ಯಾಪಾರ ವಹಿವಾಟುಗಳ ಕುರಿತಂತೆ ನಾನು ಸರ್ಕಾರಿ ಪ್ರಾಧಿಕಾರಕ್ಕೆ ಹಣಕಾಸು ವರದಿ ಸಲ್ಲಿಸಿದ್ದೇನೆ. ಅವು ಸತ್ಯ ತಿಳಿಯಲು ಆಸಕ್ತಿಯಿರುವ ಪ್ರತಿಯೊಬ್ಬರಿಗೂ ದೊರೆಯುವ ಸಾರ್ವಜನಿಕ ಸ್ವತ್ತುಗಳಾಗಿವೆ~ ಎಂದು ಹೇಳಿದರು.