ನವದೆಹಲಿ (ಪಿಟಿಐ): ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅವರಿಗೆ ವಾಗ್ದಂಡನೆ ವಿಧಿಸುವಂತೆ ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ನಾಲ್ವರು ಸಂಸದರು ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ.
ನ್ಯಾ. ಮಂಜುನಾಥ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕೊಲಿಜಿಯಂ ಮಾಡಿದ್ದ ಶಿಫಾರಸನ್ನು ಕೇಂದ್ರ ಇತ್ತೀಚೆಗೆ ವಾಪಸ್ ಕಳಿಸಿತ್ತು. ಅದಾದ ಎರಡು ತಿಂಗಳೊಳಗೆ ಈ ಬೆಳವಣಿಗೆ ನಡೆದಿದೆ.
ಸಂಸದ ಧರಂ ವೀರ್ ಗಾಂಧಿ ನೇತೃತ್ವದಲ್ಲಿ ಉಳಿದ ಪಕ್ಷಗಳ ಬೆಂಬಲ ಕೋರಲು ನಿರ್ಧರಿಸಿರುವ ಎಎಪಿ ಸಂಸದರು, ಚಳಿಗಾಲ ಅಧಿವೇಶನದಲ್ಲಿ ನೂರು ಸಂಸದರ ಸಹಿ ಸಂಗ್ರಹಿಸುವ ಉದ್ದೇಶ ಹೊಂದಿದ್ದಾರೆ.
ಸಂವಿಧಾನದ 214 (4) ಮತ್ತು 217 ನೇ ಕಲಂ ಅಡಿ ನ್ಯಾಯಮೂರ್ತಿ ವಜಾಗೊಳಿಸುವಂತೆ ರಾಷ್ಟ್ರಪತಿಯನ್ನು ಒತ್ತಾಯಿಸಲು ಈ ಸಹಿ ಸಂಗ್ರಹ ಅಭಿಯಾನ ಆರಂಭಿಸುವಂತೆ ಪಕ್ಷದ ಮುಖ್ಯಸ್ಥರು ಸೂಚಿಸಿದ್ದಾರೆ ಎಂದು ಸಂಸದ ಗಾಂಧಿ ತಿಳಿಸಿದ್ದಾರೆ.ನ್ಯಾ. ಕೆ.ಎಲ್. ಮಂಜುನಾಥ್ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿದ್ದು, ಮಗಳ ಹೆಸರಿನಲ್ಲಿದ್ದ ನಿವೇಶನ ವಿಷಯವನ್ನು ಆಸ್ತಿ ಘೋಷಣೆ ವೇಳೆ ಮರೆ ಮಾಚಿದ್ದಾರೆ ಎಂದು ಎಎಪಿ ಸಂಸದರು ಆರೋಪಿಸಿದ್ದಾರೆ.
ಕಲ್ಕತ್ತ ಹೈಕೋರ್ಟ್ ನ್ಯಾಯಮೂರ್ತಿ ಯಾಗಿದ್ದ ಸುಮಿತ್ರ ಸೆನ್ (ನಿವೃತ್ತ) ಹಾಗೂ ಸಿಕ್ಕಿಂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ.ಡಿ ದಿನಕರನ್ (ನಿವೃತ್ತ) ರಾಜೀನಾಮೆ ನೀಡಿದ ಕಾರಣ ಅವರ ವಿರುದ್ಧ ಮಂಡಿಸಲು ಉದ್ದೇಶಿಸಿದ್ದ ವಾಗ್ದಂಡನೆ ಯತ್ನಗಳೂ ವಿಫಲವಾಗಿದ್ದವು.