ರಾಜಕೀಯ ವಾತಾವರಣ ಎಷ್ಟು ಹದಗೆಟ್ಟಿದೆ ಅಂದರೆ ಮಾನವೀಯತೆ ಎಂಬ ಪದದ ಅರ್ಥವೇ ಬದಲಾಗಿದೆ. ಮೌಲ್ಯಗಳ ನಾಶವಾಗಿದೆ. ಲಂಚ ತಾಂಡವಾಡುತ್ತಿದೆ.
ಒಂದು ಸೀಟನ್ನು ಪಡೆಯಬೇಕಾದರೆ ಅನೇಕ ಹಂತಗಳಲ್ಲಿ ಹಣ ಕೊಡಬೇಕಾಗಿದೆ. ಮತದಾರರನ್ನು ಒಲಿಸಿಕೊಳ್ಳಬೇಕಾದರೆ ಕಾಂಚಾಣ ಇಲ್ಲದೆ ಸಾಧ್ಯವಿಲ್ಲ. ಕಾರ್ಯಕರ್ತರು ಗೆಲ್ಲುವ ಕುದುರೆಯ ಸಗಣಿಯನ್ನು ಎರಡು ಕೈಯಲ್ಲಿ ಹಿಡಿದು ತಲೆ ಮೇಲೆ ಹಾಕಿಕೊಳ್ಳುವ ಹಾಗೆ ಅವರ ಹಿಂದೆ ಬಿದ್ದು ಅವರಿಂದಲೂ ಹಣ ಸುಲಿಯುತ್ತಾರೆ.
ಕೆಲವು ಅಭ್ಯರ್ಥಿಗಳು ಎಲ್ಲಾ ಪಕ್ಷಗಲ್ಲಿ ಗುರುತಿಸಿಕೊಂಡು ಕಡೆಯಲ್ಲಿ ಒಂದು ಗೂಡನ್ನು ಸೇರುತ್ತಾರೆ. ಜಾತಿ ಮತ್ತು ಧರ್ಮದ ಅಡಿಯಲ್ಲಿಯೇ ಚುನಾವಣೆ ನಡೆಯುವುದೆಂಬುದು ಎಲ್ಲರಿಗೂ ತಿಳಿದ ವಿಷಯವೇ ಸರಿ. ಇದನ್ನು ಕಿತ್ತು ಹಾಕಲು ನೂರು ಗಾಂಧಿಗಳು, ನೂರು ಅಂಬೇಡ್ಕರರು ಬಂದರೂ ಸಾಧ್ಯವಿಲ್ಲ. ಅಭ್ಯರ್ಥಿಗಳು ಹಣ ಖರ್ಚು ಮಾಡುತ್ತಾರೆ. ಅಧಿಕಾರಕ್ಕೆ ಬಂದರೆ ಹತ್ತರಷ್ಟು ವಸೂಲು ಮಾಡುತ್ತಾರೆ. ಹೀಗೆ ಜಾತಿ, ಮತ ಮತ್ತು ಲಂಚ ಶಾಶ್ವತವಾಗಿ ಸಮಾಜವನ್ನು ಶಿಥಿಲಗೊಳಿಸಿ, ನಾಶ ಮಾಡುತ್ತದೆ. ಈ ಕಡೆ ಗಮನ ಹರಿಸಲಾಗದೆ?