ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಆಯಾಗಳನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಆಯಾಗಳ ಸಂಘದ ಸದಸ್ಯರು ನಗರದ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಸೋಮವಾರ ಪ್ರತಿಭಟನಾ ರ್ಯಾಲಿ ನಡೆಸಿದರು.
ಸುಮಾರು 30 ವರ್ಷಗಳಿಂದ ಪ್ರಾಥಮಿಕ ಶಾಲೆಗಳಲ್ಲಿ ಆಯಾ ಕೆಲಸ ಮಾಡುತ್ತಿರುವ ಮಹಿಳೆಯರ ಜೀವನ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ರಾಜ್ಯದಲ್ಲಿ 2550 ಮಂದಿ ಆಯಾಗಳು ಕಾರ್ಯ ನಿರ್ವಹಿಸುತ್ತಿದ್ದು, ಖಾಯಂ ನೇಮಕ ಮಾಡಿಕೊಳ್ಳದಿರುವುದರಿಂದ ಅವರಿಗೆ ಜೀವನ ಭದ್ರತೆ ಇಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಹುನಗುಂದ ತಾಲ್ಲೂಕಿನಲ್ಲಿ ವಜಾಗೊಳಿಸಲಾಗಿದ್ದ ಆಯಾಗಳನ್ನು ಮರು ನೇಮಕ ಮಾಡಿಕೊಳ್ಳಬೇಕು. ಹಾಗೆಯೇ ತಡೆ ಹಿಡಿಯಲಾಗಿರುವ ಅವರ ವೇತನವನ್ನು ಮಂಜೂರು ಮಾಡಬೇಕು. ಮೃತಪಟ್ಟ ಹಾಗೂ ವಯೋಮಿತಿ ಮೀರಿದ ಆಯಾಗಳ ಬದಲಿಗೆ ಅವರ ಸಂಬಂಧಿಕರಿಗೆ ಕೆಲಸ ನೀಡಬೇಕು. ವರ್ಷಕ್ಕೆ ಇಂತಿಷ್ಟು ರಜಾ ದಿನಗಳನ್ನು ನಿಗದಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಕಾರ್ಮಿಕ ಇಲಾಖೆಯ ಅಧಿಸೂಚನೆಯಂತೆ 4800 ರೂಪಾಯಿ ಕನಿಷ್ಠ ವೇತನವನ್ನು ನಿಗದಿಪಡಿಸಬೇಕು. ವಯೋವೃದ್ಧ ಆಯಾಗಳಿಗೆ ಸದ್ಯ ನೀಡುತ್ತಿರುವ 3000 ರೂಪಾಯಿ ವೇತನವನ್ನು ಕುಟುಂಬ ಪಿಂಚಣಿಯೆಂದು ಪರಿಗಣಿಸಿ, ಅವರ ಜೀವಿತಾವಧಿಯವರೆಗೆ ಪಿಂಚಣಿ ನೀಡಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.