ಯಾದಗಿರಿ: ಆಯುಷ್ ಇಲಾಖೆ ಹಾಗೂ ಶಿರಸಿಯ ನಿಸರ್ಗ ಟ್ರಸ್ಟ್ಗಳ ಸಹಯೋಗದಲ್ಲಿ ನಗರದಲ್ಲಿ ಮೂರು ದಿನ ನಡೆದ ಆಯುಷ್ ಆರೋಗ್ಯ ಮೇಳ ಯಶಸ್ವಿಯಾಗಿ ನಡೆಯಿತು.
ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಆಯೋಜಿಸಿದ್ದ ಆರೋಗ್ಯ ಮೇಳದಲ್ಲಿ ಒಟ್ಟು 995 ಜನರು ರೋಗಗಳಿಗೆ ಮತ್ತು ಸಮಸ್ಯೆಗಳಿಗೆ ಚಿಕಿತ್ಸೆ ಮತ್ತು ಪರಿಹಾರವನ್ನು ಕಂಡುಕೊಂಡರು.
ಮೇಳದಲ್ಲಿ ಆಯುರ್ವೆದ, ಹೋಮಿಯೋಪತಿ, ಯುನಾನಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಅಲ್ಲದೇ ಮನೆಮದ್ದು ಬಗ್ಗೆ ಮಾಹಿತಿ ನೀಡಲಾಯಿತು. ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಮೇಳದ ಪ್ರಯೋಜನ ಪಡೆದರು. ಜಿಲ್ಲೆಯಲ್ಲಿನ ಆಯುಷ್ ಇಲಾಖೆಯ ವೈದ್ಯರು ಸಕ್ರಿಯವಾಗಿ ಪಾಲ್ಗೊಂಡು ರೋಗಿಗಳಿಗೆ ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿ ಪದ್ಧತಿಗಳಲ್ಲಿ ಔಷಧ ಹಾಗೂ ಸ್ನೇಹನ ಮತ್ತು ಸ್ವೇಧನ ಹಾಗೂ ಕಪ್ಪಿಂಗ್ ಥೆರಪಿ ಮೂಲಕ ಉಚಿತ ಚಿಕಿತ್ಸೆ ಹಾಗೂ ಔಷಧಿಗಳನ್ನು ವಿತರಿಸಿದರು.
ಮಧುಮೇಹಿಗಳಿಗೆ ಉಚಿತವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮತ್ತು ರಕ್ತದ ಒತ್ತಡವನ್ನು ಪರೀಕ್ಷಿಸಲಾಯಿತು. ಇಲಾಖೆಯ ವಿವಿಧ ಪದ್ಧತಿಗಳ ಮಾಹಿತಿ ಇರುವ ಚಾರ್ಟ್ಗಳನ್ನು ವಿತರಿಸಲಾಯಿತು.
ನಿಸರ್ಗ ಟ್ರಸ್ಟ್ನ ಡಾ.ವೆಂಕಟರಮಣ ಹೆಗಡೆ, ತಜ್ಞ ವೈದ್ಯ ಡಾ.ಪ್ರವೀಣ ಜಾಕೋಬ ಇವರು ಮಧುಮೇಹಿ ರೋಗಿಗಳು ಹಾಗೂ ಹೃದ್ರೋಗಿಗಳು ಅನುಸರಿಸಬೇಕಾದ ಆಹಾರ ಕ್ರಮ ಮತ್ತು ವಿಹಾರದ ಬಗ್ಗೆ ಪ್ರಾತ್ಯಕ್ಷತೆಯೊಂದಿಗೆ ಉಪನ್ಯಾಸ ನೀಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ವಂದನಾ ಗಾಳಿ ನೇತೃತ್ವದಲ್ಲಿ ಆಯುಷ್ ವೈದ್ಯರಾದ ಡಾ.ಎ.ಡಿ. ಗಂಗನಾಳ, ಡಾ.ಪ್ರಕಾಶ ರಾಜಾಪುರ, ಡಾ.ರಮೇಶ ಸಜ್ಜನ, ಡಾ. ಪ್ರಮೋದ ಕುಲಕರ್ಣಿ, ಡಾ.ಪ್ರೇಮಾ ರಾಜಾಪುರ, ಡಾ.ಸುನಂದಾ ಕುದರಿ, ಡಾ.ರಾಮರಡ್ಡಿ, ಡಾ.ಮೀರಾ ಜೋಶಿ, ಡಾ.ದೀಪಾ ರಾಠೋಡ, ಡಾ.ಹಣಮಂತ, ಡಾ.ವಜೀರ್, ಡಾ.ಮಂಜುನಾಥ, ಡಾ. ಸಂಜಯ ಕುಲಕರ್ಣಿ, ಡಾ.ಗಂಗಾಧರ ಸರಾಫ್, ಡಾ.ಶಿವಲಿಂಗಪ್ಪ, ಡಾ.ಶಫಿ, ಡಾ.ರಾಜೇಶ್ವರಿ ಮುಂತಾದವರು ಪಾಲ್ಗೊಂಡಿದ್ದರು.