ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ಶಿವಮೊಗ್ಗ ನಗರದ ಎಚ್.ಆರ್.ಉಮೇಶ್ ಆರಾಧ್ಯ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ನಮ್ಮ ದೇಶದಲ್ಲಿರುವ ಎಫ್.ಪಿ.ಎ.ಐ. ಸಂವಿಧಾನದ ಧ್ಯೇಯೋದ್ದೇಶಗಳೆಂದರೆ ಇದೊಂದು ರಾಜಕೀಯೇತರ ಮತ್ತು ಯಾವುದೇ ಜಾತಿ, ಧರ್ಮ, ಲಿಂಗ, ವಯೋಮಾನ ಮತ್ತು ಕ್ಷೇತ್ರಬೇಧವಿಲ್ಲದೆ ಇರುವ ಸಂಘಟನೆಯಾಗಿದ್ದು, ಇದರ ಸದಸ್ಯರಾಗುವವರು ಈ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಅಂದರೆ ಇಲ್ಲಿ ಯಾವುದೇ ಪಕ್ಷದಲ್ಲಿರುವವರು ಅಥವಾ ರಾಜಕೀಯ ಆಯಾಮ ಇರುವ ವ್ಯಕ್ತಿಗಳು ಸದಸ್ಯರಾಗುವಂತಿಲ್ಲ. ಆದರೆ ಬಿ.ಜೆ.ಪಿ. ಪಕ್ಷದ ರಾಜಕೀಯ ಹಿನ್ನೆಲೆ ಇರುವ ಉಮೇಶ್ ಅವರು ಒಳ್ಳೆಯ ಇತಿಹಾಸ ಇರುವ ಎಫ್.ಪಿ.ಎ.ಐ. ದಂತಹ ಸಂಸ್ಥೆಯಲ್ಲಿ ಹೇಗೆ ಸದಸ್ಯರಾಗಿ ಬಹುಬೇಗ ಕೇಂದ್ರ ಸಮಿತಿಯಲ್ಲಿ ಉಪಾಧ್ಯಕ್ಷರಾದರು ಎಂಬುದೇ ಸೋಜಿಗದ ವಿಷಯ ಈಗ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಬೇರೆ!
ಬಿ.ಜೆ.ಪಿ. ಜೊತೆ ಗುರುತಿಸಿ ಕೊಂಡಿರುವುದರಿಂದಲೇ ಆಯೋಗದ ಅಧ್ಯಕ್ಷಗಿರಿ ಇವರಿಗೆ ಲಭಿಸಿರುವುದಂತೂ ಸ್ಪಷ್ಟ. ನೇಮಕಕ್ಕೆ ಇದೊಂದು ಮುಖ್ಯವಾದ ಅರ್ಹತೆ!
ಈಗಿನ ಮಹಿಳಾ ಆಯೋಗದ ಅಧ್ಯಕ್ಷರ ಹುದ್ದೆಗೂ ಸರ್ಕಾರ ಇದೇ ರೀತಿಯ ಮಾನದಂಡ ಅನುಸರಿಸಲಾಗಿದೆ. ನಿಷ್ಪಕ್ಷಪಾತದಿಂದ ಕರ್ತವ್ಯ ನಿಭಾಯಿಸಬೇಕಿರುವ ಈ ಆಯೋಗಗಳಿಗೆ ಒಂದು ಸರ್ಕಾರವು ತಮ್ಮ ಪಕ್ಷದವರನ್ನೇ ನೇಮಿಸಿಕೊಂಡರೆ ಅಧ್ಯಕ್ಷರಾದವರು ಎಷ್ಟರಮಟ್ಟಿಗೆ ತಮ್ಮ ಸ್ಥಾನಕ್ಕೆ ನ್ಯಾಯ ಒದಗಿಸಬಲ್ಲರು?