ಲಖನೌ (ಪಿಟಿಐ): ಚುನಾವಣಾ ಆಯೋಗದ ಮೇಲೆ ಹರಿಹಾಯ್ದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ, ಬಿಎಸ್ಪಿ ಚುನಾವಣಾ ಚಿನ್ಹೆಯಾದ ಆನೆ ಮತ್ತು ತಮ್ಮ ಪ್ರತಿಮೆಗಳಿಗೆ ಮುಸುಕು ಹಾಕುವಂತೆ ಸೂಚಿಸಿರುವ ಆಯೋಗದ ಕ್ರಮ ಏಕಪಕ್ಷೀಯ ಮತ್ತು ಪಕ್ಷದ ಸಂಸ್ಥಾಪಕ ಕಾನ್ಶಿರಾಂ ಅವರ ಭಾವನೆಗೆ ಅಪಮಾನ ಮಾಡಿದಂತೆ ಎಂದು ಹೇಳಿದ್ದಾರೆ.
ಕಾನ್ಶಿರಾಂ ಅವರ ಭಾವನೆಗೆ ಅನುಗುಣವಾಗಿ ಆನೆ ಮತ್ತು ತಮ್ಮ ಸ್ವಂತ ಪ್ರತಿಮೆಗಳನ್ನು ಸ್ಥಾಪಿಸುವ ಮೂಲಕ ಅವರಿಗೆ ಗೌರವ ಸೂಚಿಸಿದ್ದೇವೆ. ಆದರೆ ಚುನಾವಣಾ ಆಯೋಗ ಬಿಎಸ್ಪಿ ಅಭಿಮತವನ್ನು ಕೇಳದೇ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ಇಂತಹ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ ಎಂದು ಚುನಾವಣಾ ರ್ಯಾಲಿ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಆಯೋಗದ ಈ ಕ್ರಮ ಎಲ್ಲಾ ವರ್ಗದ ಜನರು ಮತ್ತು ಬುದ್ಧಿಜೀವಿಗಳಿಗೆ ಅವಮಾನ ಮಾಡಿದಂತೆ. ಜತೆಗೆ ಜಾತೀಯ ಆಧಾರ ಮೇಲೆ ತೆಗೆದುಕೊಂಡ ನಿರ್ಧಾರ ಹಾಗೂ ದಲಿತ ವಿರೋಧಿ ಧೋರಣೆ ಆಗಿದೆ ಎಂದೂ ಅವರು ಬಣ್ಣಿಸಿದರು.
ಉತ್ತರಪ್ರದೇಶ ವಿಧಾನಸಭೆಯ 403 ಸ್ಥಾನಗಳಲ್ಲಿ ಪರಿಶಿಷ್ಟ ಜಾತಿಗೆ 88, ಇತರ ಹಿಂದುಳಿದ ವರ್ಗಕ್ಕೆ 113, ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರಿಗೆ 85 ಮತ್ತು 74 ಬ್ರಾಹ್ಮಣರು ಸೇರಿದಂತೆ 117 ಸ್ಥಾನಗಳನ್ನು ಮೇಲ್ವರ್ಗದವರಿಗೆ ಹಂಚಿಕೆ ಮಾಡಿರುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.