ಹಿರಿಯೂರು: ರಾಜ್ಯದ ಬಿಜೆಪಿ ಸರ್ಕಾರ ಅಗತ್ಯ ಅನುದಾನ ನೀಡುವ ಮೂಲಕ ನ್ಯಾಯಮೂರ್ತಿ ಸದಾಶಿವ ಅವರ ನೇತೃತ್ವದಲ್ಲಿ ಪರಿಶಿಷ್ಟರಲ್ಲಿ ಜನಸಂಖ್ಯೆ ಆಧರಿಸಿ ಮೀಸಲಾತಿ ನೀಡುವ ಬಗ್ಗೆ ವರದಿ ನೀಡಲು ಆಯೋಗ ರಚನೆ ಮಾಡಿರುವುದು ಅಭಿನಂದನೀಯ ವಿಚಾರ. ಈ ವರದಿ ತಕ್ಷಣ ಅಂಗೀಕರಿಸಿ ಕೇಂದ್ರದ ಅನುಮೋದನೆಗೆ ಕಳಿಸಿಕೊಡಬೇಕು ಎಂದು ಮಾದಿಗ ಜನಾಂಗದ ಮುಖಂಡ ಕೆ. ಓಂಕಾರಪ್ಪ ಒತ್ತಾಯಿಸಿದರು.
ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸದಾಶಿವ ಆಯೋಗದ ವರದಿ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಮಾದಿ ಜನಾಂಗದ ಪ್ರಮುಖರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ವರದಿಯಲ್ಲಿ ಮಾದಿಗ ಜನಾಂಗಕ್ಕೆ ಶೇ 6, ಛಲವಾದಿ ಜನಾಂಗಕ್ಕೆ ಶೇ 5, ಸ್ಪೃಷ್ಯ ದಲಿತರಿಗೆ ಶೇ 3, ಇತರೆ ದಲಿತರಿಗೆ ಶೇ 1ರಂತೆ ಮೀಸಲಾತಿ ನೀಡುವಂತೆ ಶಿಫಾರಸು ಮಾಡಿರುವುದು ನ್ಯಾಯ ಸಮ್ಮತವಾಗಿದೆ. ವರದಿ ಜಾರಿಗೊಳಿಸುವಂತೆ ದಲಿತ ಸಂಘರ್ಷ ಸಮಿತಿಯ ಎಲ್ಲಾ ಹೋರಾಟ ಸಮಿತಿಗಳು, ಮಾದಿಗ ಜನಾಂಗದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಒಳಗೊಂಡು ಜಿಲ್ಲಾ ಮಾದಿಗ ಮಹಾಸಭಾ ಅಡಿಯಲ್ಲಿ ಚಿತ್ರದುರ್ಗದಲ್ಲಿ ಬೃಹತ್ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.
ಪ್ರತಿಭಟನೆ ನಡೆಸುವ ಮೂಲಕ ಕೆಲವರು ವರದಿ ಜಾರಿಗೆ ವಿರೋಧಿಸುತ್ತಿರುವುದು ಸರಿಯಲ್ಲ. ಇದು ಸಂವಿಧಾನಬದ್ಧವಾದ, ವೈಜ್ಞಾನಿಕ ವರದಿಯಾಗಿದ್ದು, ಪರಿಶಿಷ್ಟರಲ್ಲಿ ಸಮಾನ ಅವಕಾಶ ಕಲ್ಪಿಸಲಿದೆ. ಜುಲೈ 14ರಂದು ಬೆಳಿಗ್ಗೆ 11ಕ್ಕೆ ಪ್ರವಾಸಿ ಮಂದಿರದಲ್ಲಿ ಜಿಲ್ಲಾಮಟ್ಟದ ಮುಖಂಡರ ಸಭೆ ಕರೆದಿದ್ದು, ಹೋರಾಟದ ಬಗ್ಗೆ ಸ್ಪಷ್ಟ ಕಾರ್ಯಕ್ರಮ ಸಿದ್ಧಪಡಿಸಲಾಗುವುದು. ಜನಾಂಗದ ಮುಖಂಡರು ಪಾಲ್ಗೊಳ್ಳಬೇಕು ಎಂದು ಕೋರಿದರು.
ಎಂ.ಡಿ. ಚಂದ್ರಶೇಖರ್, ಎಂ. ಹನುಮಂತರಾಯಪ್ಪ, ಹರೀಶ್ಕುಮಾರ್, ಪ್ರಕಾಶ್, ಹರ್ತಿಕೋಟೆ ದಯಾನಂದ್, ಸಿದ್ದಪ್ಪ, ಎಸ್.ಕೆ. ಮಂಜುನಾಥ್, ಮಹಾಲಿಂಗಪ್ಪ, ರಮೇಶ್ಬೆಳ್ಳಿ, ಕೆ. ಮಂಜುನಾಥ್, ಹುಚ್ಚವ್ವನಹಳ್ಳಿ ತಿಪ್ಪೇಸ್ವಾಮಿ, ಗೌಡನಹಳ್ಳಿ ಗಿರೀಶ್, ಕೆ.ಪಿ. ಶ್ರೀನಿವಾಸ್, ಬೋರನಕುಂಟೆ ಜೀವೇಶ್, ಕೆ. ಗೌಡಪ್ಪ, ನಂದಕುಮಾರ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.