ಬೆಂಗಳೂರು: 1998, 1999 ಮತ್ತು 2004ರಲ್ಲಿ ಗೆಜೆಟೆಡ್ ಪ್ರೊಬೇಷನರಿ (ಎ ಮತ್ತು ಬಿ ವೃಂದ) ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಅಕ್ರಮ ನಡೆಸಿದವರ ವಿರುದ್ಧ, ಸಿಐಡಿ ವರದಿ ಆಧರಿಸಿ ಕ್ರಮ ಜರುಗಿಸಿ ಎಂದು ಸರ್ಕಾರ ಬರೆದ ಪತ್ರಕ್ಕೆ ತಣ್ಣನೆಯ ಉತ್ತರ ನೀಡಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ), ಆಯ್ಕೆ ಪಟ್ಟಿ ಪ್ರಕಟಿಸಿದ ನಂತರ ತನ್ನ ಕೆಲಸ ಮುಗಿದಂತೆ ಎಂದು ಹೇಳಿದೆ!
‘ಅಕ್ರಮ ಎಸಗಿದವರ ವಿರುದ್ಧ ಕ್ರಮ ಜರುಗಿಸಿ’ ಎಂದು ಸಿಬ್ಬಂದಿ ಮತ್ತು ಆಡ ಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜೀವ ಕುಮಾರ್ ಅವರು ಕೆಪಿಎಸ್ಸಿ ಕಾರ್ಯದರ್ಶಿ ಕೆ. ಆರ್. ಸುಂದರ್ ಅವರಿಗೆ ಪತ್ರ ಬರೆ ದಿ ದ್ದರು. ಇದಕ್ಕೆ ಉತ್ತರಿಸಿರುವ ಸುಂದರ್, ‘ಅಭ್ಯರ್ಥಿಗಳ ಆಯ್ಕೆ ಪಟ್ಟಿ ಯನ್ನು ಪ್ರಕಟಿಸಿದ ನಂತರ, ಆಯೋಗದ ಕಾರ್ಯ ಪೂರ್ಣಗೊಂಡಂತೆ’ ಎಂದು ಹೇಳಿದ್ದಾರೆ.
ಸುಂದರ್ ಅವರು ಇದೇ 4ರಂದು ಬರೆದಿರುವ ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಸಿಐಡಿ ವರದಿ ಆಧರಿಸಿ ಕ್ರಮ ಜರುಗಿಸಬೇಕು ಎಂದು ಸಂಜೀವ ಅವರು ಕೆಪಿಎಸ್ಸಿಗೆ ನಿರ್ದೇಶನ ನೀಡಿ ದ್ದರು.
ಸಿಐಡಿ ವರದಿ ಆಧರಿಸಿ, 1998, 1999, 2004ರಲ್ಲಿ ನಡೆದ ನೇಮಕಾತಿ ಯಲ್ಲಿ ಅಕ್ರಮ ನಡೆಸಿದವರ ವಿರುದ್ಧ ಕ್ರಮ ಜರುಗಿಸಬೇಕು.
ಹೈಕೋರ್ಟ್ ನಿರ್ದೇಶ ನದ ಅನುಸಾರ ನೇಮಕಾತಿ ಪಟ್ಟಿಯನ್ನು ಪುನಃ ಸಿದ್ಧಪಡಿಸಬೇಕು. ಸಿಐಡಿ ವರದಿ ಯಲ್ಲಿ ಹೆಸರಿಸಲಾದ ಆಯೋಗದ ಅಧಿ ಕಾರಿಗಳಾದ ಕೆ. ನರಸಿಂಹ, ಗೋಪಿಕೃಷ್ಣ ಮತ್ತು ಎಂ.ಬಿ. ಬಣಕಾರ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿತ್ತು. ಮೂವರು ಅಧಿಕಾರಿ ಗಳ ವಿರುದ್ಧ ಆಂತರಿಕ ತನಿಖೆ ಆರಂ ಭವಾಗಿದೆ ಎಂದು ಆಯೋಗ ಉತ್ತರ ನೀಡಿದೆ.
ಸಂಪುಟದಲ್ಲಿ ವರದಿ: 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಿಐಡಿ ತನಿಖೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಆ ಕುರಿತು ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ಆಗುವ ಸಾಧ್ಯತೆ ಇದೆ.