ಶಿವಮೊಗ್ಗ: ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಚುನಾವಣಾ ಪ್ರಚಾರದ ವೇಳೆ ಮಹಿಳೆಯರ ಆರತಿ ತಟ್ಟೆಗೆ ಹಣ ಹಾಕಿದ ಹಿನ್ನೆಲೆಯಲ್ಲಿ ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯೂ ಆದ ಕೆ.ಎಸ್. ಈಶ್ವರಪ್ಪ ನಗರದ ಗುರುಪುರ ಬಡಾವಣೆಯ ಚುನಾವಣಾ ಪ್ರಚಾರದ ಪಾದಯಾತ್ರೆ ನಡೆಸುವ ವೇಳೆ ಮಹಿಳಾ ಮತದಾರರ ಆರತಿ ತಟ್ಟೆಗೆ ಹಣ ಹಾಕಿದ್ದಾರೆ.
ಮತದಾರರಿಗೆ ಹಣದ ಆಮಿಷವೊಡ್ಡುವ ಮೂಲಕ ಚುನಾವಣಾ ಮಾದರಿ ನೀತಿಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಮಾದರಿ ನೀತಿಸಂಹಿತೆ ಜಾರಿ ತಂಡದ ಅಧಿಕಾರಿ ವಿಶ್ವನಾಥ್ ಪ್ರಕರಣ ದಾಖಲಿಸಿದ್ದಾರೆ.
ಈಶ್ವರಪ್ಪ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 171 (ಇ) (ಎಚ್) ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ 123 (ಎ) ರ ಅಡಿ ಪ್ರಕರಣ ದಾಖಲಾಗಿದೆ.