ಶ್ರೀರಂಗಪಟ್ಟಣ: ತಾಲ್ಲೂಕಿನ ಪ್ರಸಿದ್ಧ ಆರತಿ ಉಕ್ಕಡದ ಅಹಲ್ಯಾದೇವಿ ದೇವಾಲಯದ ಪುರಾತನ ಕಲ್ಯಾಣಿಯಲ್ಲಿ ಸೋಮವಾರ ನೂರಾರು ಮೀನುಗಳು ಮೃತಪಟ್ಟಿವೆ.
ಅಹಲ್ಯಾದೇವಿ ಮಾರಮ್ಮ ದೇವಾಲಯ ಅಭಿವೃದ್ಧಿ ಟ್ರಸ್ಟ್ ಅನ್ನು ಧಾರ್ಮಿಕ ಮತ್ತು ದತ್ತಿ ಇಲಾಖೆ ವಶಕ್ಕೆ ತೆಗೆದುಕೊಂಡು ತಿಂಗಳು ಕಳೆಯುವ ಮುನ್ನವೇ ಈ ಪ್ರಕರಣ ನಡೆದಿದೆ. ಮೃತ ಮೀನುಗಳು ನೀರಿನಲ್ಲಿ ತೇಲುತ್ತಿರುವುದನ್ನು ಕಂಡು ಭಕ್ತರೊಬ್ಬರು ಮುಂಜಾನೆ ತಾಲ್ಲೂಕು ಆಡಳಿತಕ್ಕೆ ವಿಷಯ ಮುಟ್ಟಿಸಿದ್ದಾರೆ. ಹಲವು ವರ್ಷಗಳಿಂದ ಕಲ್ಯಾಣಿಯಲ್ಲಿದ್ದ ಗೆಂಡೆಮೀನು, ಔಲುಮೀನು, ಜಿಲೇಬಿ, ಕೊರಮ ಇತರ ಜಾತಿಯ ಮೀನುಗಳು ಸತ್ತಿವೆ.
ಮೀನುಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸತ್ತ ಮೀನುಗಳ ಪೈಕಿ ಕೆಲವನ್ನು ಪರೀಕ್ಷೆಗಾಗಿ ಕೆಆರ್ಎಸ್ನಲ್ಲಿರುವ ವಿಶ್ವೇಶ್ವರಯ್ಯ ಮತ್ಸ್ಯಾಗಾರಕ್ಕೆ ಕಳುಹಿಸಲಾಗಿದೆ ಎಂದು ಉಪ ತಹಶೀಲ್ದಾರ್ ಸಿದ್ದಪ್ಪ ತಿಳಿಸಿದ್ದಾರೆ.
ಮೃತ ಮೀನುಗಳನ್ನು ಕಲ್ಯಾಣಿಯಿಂದ ಹೊರಕ್ಕೆ ತೆಗೆಯಲಾಗಿದೆ. ಪ್ರಾಣಿ, ಪಕ್ಷಿಗಳು ತಿನ್ನದಂತೆ ಅವುಗಳನ್ನು ಮಣ್ಣಿನಲ್ಲಿ ಹೂಳಲಾಗಿದೆ ಎಂದು ತಿಳಿಸಿದ್ದಾರೆ. ಇಲ್ಲಿನ ಕಲ್ಯಾಣಿಯಲ್ಲಿ ಕಟ್ಟೆ ಒಡೆಯುವ ಆಚರಣೆ ಹಲವು ವರ್ಷಗಳಿಂದ ನಡೆಯುತ್ತಿದೆ. ನೀರು ಕಲುಷಿತಗೊಂಡಿರುವುದರಿಂದ ಮೀನುಗಳು ಸತ್ತಿರಬಹುದು ಎಂದು ತಹಶೀಲ್ದಾರ್ ಎಂ.ಸಿ.ಮಹದೇವು ಶಂಕೆ ವ್ಯಕ್ತಪಡಿಸಿದ್ದಾರೆ. ಒಮ್ಮೆಲೇ ಇಷ್ಟು ಮೀನುಗಳು ಮೃತಪಟ್ಟಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಉಪ ತಹಶೀಲ್ದಾರ್ ಜಯರಾಂ ಸ್ಥಳಕ್ಕೆ ಭೇಟಿ ನೀಡಿದ್ದರು.