ಗಾಜಿಯಾಬಾದ್ (ಪಿಟಿಐ): ಪುತ್ರಿ ಆರುಷಿ ಹಾಗೂ ಮನೆಕೆಲಸದಾಳು ಹೇಮರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಂತವೈದ್ಯ ದಂಪತಿ ನೂಪುರ್ ಹಾಗೂ ರಾಜೇಶ್ ತಲ್ವಾರ್ ವಿರುದ್ಧ ದೋಷಾರೋಪ ಸಲ್ಲಿಸುವಂತೆ ಸ್ಥಳೀಯ ನ್ಯಾಯಾಲಯ ಆದೇಶಿಸಿದೆ.ಗಾಜಿಯಾಬಾದ್ ಕೊರ್ಟ್ನಲ್ಲಿ ಶುಕ್ರವಾರ ದೋಷಾರೋಪ ಪ್ರಕ್ರಿಯೆ ನಡೆಯಲಿದೆ.
ಐಪಿಸಿ 302 (ಕೊಲೆ) ಹಾಗೂ 34 (ಒಂದೇ ಉದ್ದೇಶದಿಂದ ಹಲವು ಜನ ಮಾಡಿದ ಕೃತ್ಯ) ಮತ್ತು 201ರ (ಸಾಕ್ಷ್ಯನಾಶ ಅಥವಾ ಆರೋಪಿ ರಕ್ಷಿಸಲು ಸುಳ್ಳುಮಾಹಿತಿ) ಅಡಿ ಈ ದಂಪತಿಯ ವಿರುದ್ಧ ದೋಷಾರೋಪ ಮಾಡಲಾಗುವುದು.
ಅಪರಾಧದ ಕುರಿತು ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಐಪಿಸಿ 203ರ ಅಡಿಯೂ ದೋಷಾರೋಪ ಹೊರಿಸಲಾಗುವುದು.ಕೊಲೆ ನಡೆದ ರಾತ್ರಿ ಮನೆಯಲ್ಲಿ ನಾಲ್ಕು ಜನರಿದ್ದರು ಹಾಗೂ ಬೆಳಗಾಗುವುದರಲ್ಲಿ ಇಬ್ಬರು ಕೊಲೆಯಾಗಿದ್ದರು ಎಂಬ ಸಿಬಿಐ ವಾದವನ್ನು ಕೋರ್ಟ್ ಪುರಸ್ಕರಿಸಿದೆ. ದಿಕ್ಕು ತಪ್ಪಿಸುವ ಎಫ್ಐಆರ್ ದಾಖಲಿಸಿದ್ದಕ್ಕಾಗಿ ಐಪಿಸಿ 203ರ ಅಡಿ ರಾಜೇಶ್ ತಲ್ವಾರ್ ವಿರುದ್ಧ ದೋಷಾರೋಪ ಮಾಡಲಾಗುವುದು ಎಂದು ಸಿಬಿಐ ವಕೀಲ ಆರ್.ಕೆ. ಸೈನಿ ಹೇಳಿದ್ದಾರೆ.
ಅಪರಾಧ ನಡೆದ ಸ್ಥಳವನ್ನು ಸ್ವಚ್ಛಗೊಳಿಸಲಾಗಿತ್ತು ಹಾಗೂ ಹೊರಗಿನವರು ಮನೆ ಪ್ರವೇಶಿಸಿದ ಯಾವ ಕುರುಹು ಇಲ್ಲದ ಕಾರಣ ಈ ದಂಪತಿಯೇ ಕೊಲೆ ಮಾಡಿದ್ದಾರೆ ಎಂಬುದು ಸಿಬಿಐ ವಾದ.