ಆಲಮೇಲ: ಪಟ್ಟಣದ ಆರೂಢ ಸಂಗನಬಸವೇಶ್ವರ ಜಾತ್ರಾ ಮಹೋತ್ಸವವು ಗುರುವಾರ ಸಂಜೆ ತೇರು ಎಳೆಯುವ ಮೂಲಕ ಮುಕ್ತಾಯಗೊಂಡಿತು.ಬೆಳಿಗ್ಗೆಯಿಂದ ಹತ್ತಾರು ಕಾರ್ಯಕ್ರಮಗಳು ನಡೆದವು. ಸಂಜೆ 5 ಗಂಟೆಗೆ ನೂರಾರು ಯುವಕ ಭಕ್ತರು ಮಡಿ ಸ್ನಾನದಿಂದ ರಥವನ್ನೆಳೆಯುವ ಮೂಲಕ ಸಂಭ್ರಮಿಸಿದರು.
ಸಾವಿರಾರು ಮಹಿಳೆಯರು ರಥ ಬರುವ ಮಾರ್ಗದಲ್ಲಿ ನಿಂತುಕೊಂಡು ಉತ್ತತ್ತಿ, ಕಲ್ಲುಸಕ್ಕರೆ, ಹಣ್ಣು ಇತ್ಯಾದಿ ಎಸೆದು ಭಕ್ತಿ ಪ್ರದರ್ಶಿಸಿದರು.
ಪುರವಂತರು ಶಸ್ತ್ರಗಳನ್ನು ಹಾಕಿಕೊಳ್ಳುವ ಮೂಲಕ ತಮ್ಮ ತಮ್ಮ ಸೇವಾ ಕೈಂಕರ್ಯವನ್ನು ತೋರಿದರು. ಬೆಳಿಗ್ಗೆ ವಿವಾಹವಾದ ನವ ಜೋಡಿಗಳು ಈ ಸಂದರ್ಭದಲ್ಲಿ ಹಾಜರಿದ್ದು ತಮ್ಮ ಸೇವೆ ಮಾಡಿದರು.
ಸಿದ್ದರಾಮ ಶಿವಾಚಾರ್ಯರು, ಅಶೋಕ ಮಹಾರಾಜರು ರಥಕ್ಕೆ ಕಳಸಾರೋಹಣ ಮಾಡಿದರು. ಶ್ರೀಮಠದ ಶರಣಬಸವ ಶರಣರ ಸಮ್ಮುಖದಲ್ಲಿ ಹತ್ತಾರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಚಾಲನೆ ನೀಡಿದರು. ರಥೋತ್ಸವ ಸಂದರ್ಭದಲ್ಲಿ ಸಾವಿರಾರು ಸದ್ಭಕ್ತರು ಸೇರಿದ್ದರು.