ಹಾವೇರಿ: ‘ಆರೋಗ್ಯ ಇಲಾಖೆ ಹಾಗೂ ವಾಜಪೇಯಿ ಆರೋಗ್ಯಶ್ರೀ ಯೋಜನೆಗೆ ಬಜೆಟ್ನಲ್ಲಿ 1300 ಕೋಟಿ ರೂ. ಹೆಚ್ಚುವರಿ ಹಣವನ್ನು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ನಗರದ ಹುಕ್ಕೇರಿ ಮಠದ ಆವರಣದಲ್ಲಿ ಸೋಮವಾರ ವಾಜಪೇಯಿ ಆರೋಗ್ಯಶ್ರೀ ಯೋಜನೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಆರೋಗ್ಯ ಇಲಾಖೆಗೆ ಕಳೆದ ಬಜೆಟ್ನಲ್ಲಿ 800 ಕೋಟಿ ರೂ. ಅನುದಾನ ನೀಡಲಾಗಿತ್ತು. ಈ ಸಲದ ಬಜೆಟ್ನಲ್ಲಿ ಹೆಚ್ಚುವರಿಯಾಗಿ 1300 ಕೋಟಿ ರೂ. ಸೇರಿ ಒಟ್ಟು 2100 ಕೋಟಿ ರೂ. ಮೀಸಲಿಡಬೇಕೆಂದು ಮುಖ್ಯಮಂತ್ರಿಗಳನ್ನು ಕೇಳಿಕೊಳ್ಳಲಾಗಿದೆ ಎಂದರು.
ಈ ಹಣದಲ್ಲಿ ವಾಜಪೇಯಿ ಆರೋಗ್ಯಶ್ರೀ ಯೋಜನೆಗೆ 800 ಕೋಟಿ ರೂ.ಗಳನ್ನು ಮೀಸಲಿಡಲು ಉದ್ದೇಶಿಸಿದ್ದು, ಉಳಿದ1300 ಕೋಟಿ ರೂ.ಗಳನ್ನು ಇಲಾಖೆಯ ಇನ್ನಿತರ ಯೋಜನೆಗಳಿಗೆ ಖರ್ಚು ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರ ಐದು ವರ್ಷ ಪೂರ್ಣಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ವಿರೋಧ ಪಕ್ಷಗಳು ಜನತೆಯಲ್ಲಿ ಗೊಂದಲ ಹುಟ್ಟಿಸಲು ಸರ್ಕಾರದ ಅಸ್ಥಿರತೆಯ ಬಗ್ಗೆ ಮಾತನಾಡುತ್ತಿವೆ. 2011ರಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂಬುದು ವಿಪಕ್ಷಗಳ ಭ್ರಮೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಸಚಿವ ಸಿ.ಎಂ.ಉದಾಸಿ, ಶಾಸಕರಾದ ಸುರೇಶಗೌಡ ಪಾಟೀಲ, ಶಾಸಕರಾದ ನೆಹರೂ ಓಲೇಕಾರ್, ಜಿ.ಶಿವಣ್ಣ, ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ಸೇರಿದಂತೆ ಮತ್ತಿರರು ಹಾಜರಿದ್ದರು.