ಮೈಸೂರು: ನಗರದ ಹಲವಾರು ಕಡೆ ಆರೋಗ್ಯ ಕೇಂದ್ರಗಳು ಇಲ್ಲದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ತನ್ವೀರ್ ಸೇಟ್ ಅಭಿಮಾನಿಗಳ ಬಳಗದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ಮಾಡಿದರು.
ನಗರದ ಹಲವಾರು ಕಡೆ ಆರೋಗ್ಯ ತಪಾಸಣೆಗೆ ಸೂಕ್ತ ಆರೋಗ್ಯ ಕೇಂದ್ರಗಳಿಲ್ಲ. ಹಾಲಿ ಇರುವ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಉದಯಗಿರಿ, ಕ್ಯಾತಮಾರನಹಳ್ಳಿ ಹಾಗೂ ಇತರೆ ಜಾಗಗಳಲ್ಲಿ ಖಾಲಿ ಇರುವ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಹಾಗೂ ಸಿಬ್ಬಂದಿ ಕೊರತೆ ಇರುವುದರಿಂದ ಬಡವರು, ನಿರ್ಗತಿಕರು ದೂರದಿಂದ ಕೆ.ಆರ್. ಆಸ್ಪತ್ರೆಗೆ ಬರಬೇಕಾಗುತ್ತದೆ. ತುರ್ತು ನಿಮಿತ್ತ ಖಾಸಗಿ ಆಸ್ಪತ್ರೆಗೆ ಹೋಗಲು ಆರ್ಥಿಕವಾಗಿ ದುರ್ಬಲವಾಗಿರುವ ಜನರೇ ಹೆಚ್ಚು.
ಹಾಗಾಗಿ ಆರೋಗ್ಯ ಕೇಂದ್ರಗಳು ಇಲ್ಲದ ಸ್ಥಳಗಳಲ್ಲಿ ಕೂಡಲೇ ಸಾರ್ವಜನಿಕ ಆರೋಗ್ಯ ಕೇಂದ್ರಗಳನ್ನು ತೆರೆಯಬೇಕು. ಹಾಲಿ ಇರುವ ಕೇಂದ್ರಗಳಿಗೆ ಸಿಬ್ಬಂದಿ ನೇಮಕ ಮಾಡಬೇಕು ಎಂದು ಆಗ್ರಹಿಸಿದರು. ಕರ್ನಾಟಕ ರಾಜ್ಯ ತನ್ವೀರ್ ಸೇಟ್ ಅಭಿಮಾನಿಗಳ ಬಳಗದ ಅಧ್ಯಕ್ಷ ಫೈರೋಜ್ ಖಾನ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.