ಮದ್ದೂರು: ವಾಹನ ಚಾಲಕರು ಕಣ್ಣುಗಳ ಆರೋಗ್ಯ ಹಾಗೂ ರಕ್ಷಣೆಯ ಬಗ್ಗೆ ಸದಾ ಎಚ್ಚರವಹಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯತ್ರಿದೇವಿ ಶುಕ್ರವಾರ ಸಲಹೆ ನೀಡಿದರು. 223ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ಪ್ರಾದೇಶಿಕ ಸಾರಿಗೆ ಇಲಾಖೆ ವಾಹನ ಚಾಲಕರಿಗೆ ಪಟ್ಟಣದಲ್ಲಿ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅಪ್ರಾಪ್ತ ವಯಸ್ಸಿನವರು ವಾಹನ ಚಲಾಯಿಸಬಾರದು. ಮೊಬೈಲ್ ಬಳಸುತ್ತ ಹಾಗೂ ಮದ್ಯಪಾನ ಸೇವಿಸಿ ವಾಹನ ಚಲಾಯಿಸಬಾರದು. ರಸ್ತೆ ಸುರಕ್ಷತಾ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಬೇಕು. ವಾಹನ ದಾಖಲಾತಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.
ಮೋಟಾರು ವಾಹನ ನಿರೀಕ್ಷಕರಾದ ಕೆ.ಜಿ.ರಾಮಸ್ವಾಮಿ, ಕೆ.ಪಿ.ರಾಮಚಂದ್ರು ಮಾತನಾಡಿದರು. ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಕೆ.ಪಿ.ಪ್ರಕಾಶ್ ಮಾತನಾಡಿದರು. ನೇತ್ರ ತಜ್ಞೆ ಡಾ.ಸುಷ್ಮಾ ಹಾಗೂ ನೇತ್ರ ಪರೀಕ್ಷಕ ಗೋವಿಂದರಾಜು ವಾಹನ ಚಾಲಕರ ನೇತ್ರ ತಪಾಸಣೆ ನಡೆಸಿದರು.
ಮಾಜಿ ಪುರಸಭಾಧ್ಯಕ್ಷ ಇನಾಯತ್ವುಲ್ಲಾಖಾನ್, ಹೊಸಗಾವಿ ಗ್ರಾ.ಪಂ ಸದಸ್ಯ ಪುಟ್ಟಸ್ವಾಮಿ, ಆಟೋ ಚಾಲಕರ ಸಂಘದ ಮಾಜಿ ಅಧ್ಯಕ್ಷ ಕೆಂಪಣ್ಣ ಸೇರಿದಂತೆ ವಿವಿಧ ವಾಹನಗಳ ನೂರಾರು ಚಾಲಕರು ಪಾಲ್ಗೊಂಡಿದ್ದರು.