ಯಳಂದೂರು: `ಮದ್ಯಪಾನ, ಧೂಮಪಾನದ ಅಭ್ಯಾಸ ತ್ಯಜಿಸಿ ಪೌಷ್ಟಿಕ ಉತ್ಪನ್ನಗಳಾದ ಹಾಲು, ಮಜ್ಜಿಗೆ, ಎಳೆನೀರು, ಕಬ್ಬಿನಹಾಲು, ಜೇನುತುಪ್ಪ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತದೆ ಎಂದು ಮೈಮುಲ್ ನಿರ್ದೇಶಕ ಶಿವಾನಂದಸ್ವಾಮಿ ಸಲಹೆ ನೀಡಿದರು.
ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಸ್ಥಳೀಯ ಹಾಲು ಉತ್ಪಾದಕ ಸಹಕಾರ ಸಂಘ ಏರ್ಪಡಿಸಿದ್ದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಅವರು ಮಾತಾನಾಡಿದರು.
ಮನುಷ್ಯ ಒಂದಲ್ಲ ಒಂದು ರೀತಿಯ ಕೆಟ್ಟ ಚಟಗಳಿಗೆ ಬಲಿಯಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾನೆ. ಇದರ ಜತೆಗೆ ಆಲ್ಕೋಹಾಲ್, ಪೆಪ್ಸಿ, ಕೋಕೊಕೋಲಾ ಮುಂತಾದ ಪಾನೀಯ ಕುಡಿದು ವಿದೇಶಿ ಕಂಪೆನಿಗಳಿಗೆ ವರಮಾನ ಒದಗಿಸುತ್ತಿದ್ದಾನೆ. ಇದರಿಂದ ದೇಸಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ರೈತ ಬದುಕುವುದು ದುಸ್ತರವಾಗಿದೆ ಎಂದರು.
ಪ್ರತಿಯೊಬ್ಬರೂ ವಿದೇಶಿ ವ್ಯಾಮೋಹ ಬಿಡಬೇಕು. ದೇಸಿ ಉತ್ಪನ್ನಗಳನ್ನು ಬಳಸುವುದರಿಂದ ರೈತನಿಗೆ ಸಹಕಾರಿಯಾಗುತ್ತದೆ. ಸ್ಥಳೀಯ ಹಾಲು ಒಕ್ಕೂಟ ಆರ್ಥಿಕವಾಗಿ ಪ್ರಬಲವಾಗುತ್ತದೆ ಎಂದರು.
ಹೊನ್ನೂರಿನ ಹಾಲು ಸಹಕಾರಿ ಸಂಘ ಪ್ರಸಕ್ತ ಸಾಲಿನಲ್ಲಿ ರೂ. 1.30 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೊನ್ನೊರು ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಎಂ. ಮಹದೇವಸ್ವಾಮಿ, ಕಾರ್ಯದರ್ಶಿ ರಾಜಶೇಖರ್, ಎಸ್. ಮಹದೇವಸ್ವಾಮಿ ಗೌಡ್ರು ಮರಿಸ್ವಾಮಿ, ನಿರ್ದೇಶಕರಾದ ಎಂ. ನಂಜುಂಡಯ್ಯ, ಎಚ್.ಎಸ್. ಗುರುಲಿಂಗಪ್ಪ, ಎಚ್.ಆರ್. ರಾಜಪ್ಪ, ಮರಯ್ಯ, ಪಿಳ್ಳೇ ಮಾದಯ್ಯ, ಜವರಶೆಟ್ಟಿ, ನಂಜಮ್ಮ, ಲಕ್ಷಮ್ಮ, ಎಚ್.ಆರ್. ರಾಜಪ್ಪ, ದುಗ್ಗಹಟ್ಟಿ ಪ್ರಭುಶಂಕರ್, ರಾಚಶೆಟ್ಟಿ ಇತರರು ಇದ್ದರು.