ನವದೆಹಲಿ (ಪಿಟಿಐ): ಮನಬಂದಂತೆ ಬಿಎಂಡಬ್ಲ್ಯು ಕಾರು ಚಲಾಯಿಸಿ ಆರು ಜನರ ಸಾವಿಗೆ ಕಾರಣವಾದ ಸಂಜೀವ್ ನಂದಾ ಅವರ ಕಾರಾಗೃಹ ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಶುಕ್ರವಾರ ಎತ್ತಿ ಹಿಡಿದಿದೆ.
ನಂದಾ ಅವರಿಗೆ ವಿಧಿಸಿದ್ದ ಐದು ವರ್ಷಗಳ ಕಾರಾಗೃಹ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಎರಡು ವರ್ಷಕ್ಕೆ ಇಳಿಸಿತ್ತು. ನಂದಾ ಎರಡು ವರ್ಷ ಸಮುದಾಯ ಸೇವೆ ಮಾಡಬೇಕು. ತಪ್ಪಿದ್ದಲ್ಲಿ ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ದೀಪಕ್ ವರ್ಮಾ ಮತ್ತು ಕೆ.ಎಸ್. ರಾಧಾಕೃಷ್ಣನ್ ತೀರ್ಪು ನೀಡಿದ್ದಾರೆ.
ನಂದಾ ಅವರ ಸಮುದಾಯ ಸೇವೆ ಕುರಿತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಎರಡು ತಿಂಗಳ ಒಳಗಾಗಿ ತೀರ್ಮಾನ ಕೈಗೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ.ನಂದಾ ಕೇಂದ್ರ ಸರ್ಕಾರಕ್ಕೆ 50 ಲಕ್ಷ ರೂಪಾಯಿ ನೀಡಬೇಕು. ಈ ಹಣದಲ್ಲಿ ನಿಧಿ ಸ್ಥಾಪಿಸಿ ಅಪಘಾತದಲ್ಲಿ ಮಡಿದ ಕುಟುಂಬದವರಿಗೆ ನೀಡಬೇಕು ಎಂದು ನಿರ್ದೇಶನ ನೀಡಿದೆ.
ಘಟನೆಯಲ್ಲಿ ತೀವ್ರ ಗಾಯಗೊಂಡವರ ಜೀವ ಉಳಿಸುವುದನ್ನು ಬಿಟ್ಟು ತನ್ನ ಸುರಕ್ಷತೆಯತ್ತ ಹೆಚ್ಚು ಗಮನ ಹರಿಸಿದ್ದ ನಂದಾ, ಘಟನೆ ಸಂಭವಿಸಿದ ಸ್ಥಳದಿಂದ ಓಡಿ ಹೋಗಿದ್ದು ಸರಿಯಾದ ವರ್ತನೆಯಲ್ಲ ಎಂದು ಕೋರ್ಟ್ ಹೇಳಿದೆ.
ಅತಿ ವೇಗದ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆಗೆ ಸಂಬಂಧಿಸಿ ವಿಚಾರಣಾಧೀನ ನ್ಯಾಯಾಲಯ ನಂದಾಗೆ ಐದು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು.1999ರ ಜನವರಿಯಲ್ಲಿ ನವದೆಹಲಿಯಲ್ಲಿ ಸಂಜೀವ್ ನಂದಾ ಮನಬಂದಂತೆ ಕಾರು ಚಲಾಯಿಸಿ ಆರು ಜನರ ಸಾವಿಗೆ ಕಾರಣರಾಗಿದ್ದರು.