ರಾಮನಗರ: ಜಿಲ್ಲಾ ಪತ್ರಿಕಾ ಭವನದ ಶಂಕುಸ್ಥಾಪನೆ ಸಮಾರಂಭದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಕರ್ತವ್ಯ ನಿರತ ಜಿಲ್ಲಾ ವಾರ್ತಾಧಿಕಾರಿ ವೈ.ಚಂದ್ರಣ್ಣ ಅವರ ಮೇಲೆ ಹಲ್ಲೆ ನಡೆಸಿದ ಪ್ರಮುಖ ಆರೋಪಿಗಳಾದ ಶಿವಕುಮಾರಸ್ವಾಮಿ, ಮಣಿ, ಸುರೇಶ್ (ನಗರಸಭೆ ಸದಸ್ಯರು) ಸಲ್ಲಿಸಿದ್ದ ನಿರೀಕ್ಷಣಾ ಜಾಮೀನಿನ ಅರ್ಜಿಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.
`ಈ ಪ್ರಕರಣ ನಡೆದು 15 ದಿನ ಕಳೆದರೂ ಆರೋಪಿಗಳನ್ನು ಏಕೆ ಬಂಧಿಸಿಲ್ಲ~ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಪೊಲೀಸರನ್ನು ಪ್ರಶ್ನಿಸಿದರು.
`ಪೊಲೀಸರ ಮುಂದೆಗಡೆಯೇ ಕರ್ತವ್ಯ ನಿರತ ವಾರ್ತಾಧಿಕಾರಿ ಮೇಲೆ ಹಲ್ಲೆ ನಡೆದಿದೆ. ಸ್ಥಳದಲ್ಲಿಯೇ ಹಲವು ಪೊಲೀಸ್ ಸಿಬ್ಬಂದಿ ಇದ್ದರೂ ಆರೋಪಿಗಳನ್ನು ಬಂಧಿಸದೆ ನಿರ್ಲಕ್ಷ್ಯ ತಾಳಿರುವುದು ಎಷ್ಟು ಸರಿ~ ಎಂದ ನ್ಯಾಯಾಧೀಶರು ಬೇಸರ ವ್ಯಕ್ತಪಡಿಸಿದರು.
ಪ್ರಕರಣದ ಹಿನ್ನೆಲೆ: ಜಿಲ್ಲಾ ವಾರ್ತಾ ಇಲಾಖೆ ಮತ್ತು ಜಿಲ್ಲಾಡಳಿತ ನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜು ಪಕ್ಕದಲ್ಲಿ ಫೆ 6ರಂದು ಜಿಲ್ಲಾ ಪತ್ರಿಕಾ ಭವನದ ಶಂಕುಸ್ಥಾಪನೆ ಸಮಾರಂಭ ಹಮ್ಮಿಕೊಂಡಿತ್ತು. ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರ ಪಾಲನೆಯಾಗಿಲ್ಲ ಎಂದು ಒಂದು ಗುಂಪು ಪ್ರತಿಭಟನೆ ನಡೆಸಿ ಕಾರ್ಯಕ್ರಮವನ್ನು ಧ್ವಂಸಗೊಳಿಸಿತ್ತು.
ಇದೇ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ಚಂದ್ರಣ್ಣ ಅವರ ಮೇಲೆ ಹಲ್ಲೆ ನಡೆದಿತ್ತು. ಈ ಸಂಬಂಧ ಚಂದ್ರಣ್ಣ ಅವರು ಅದೇ ದಿನ ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ನಗರಸಭೆ ಸದಸ್ಯರುಗಳಾದ ಶಿವಕುಮಾರಸ್ವಾಮಿ, ಮಣಿ ಹಾಗೂ ಸುರೇಶ್ ಅವರ ವಿರುದ್ಧ ದೂರು ನೀಡಿದ್ದರು.