ಮದ್ದೂರು: ಸಮೀಪದ ನಿಡಘಟ್ಟ ಗ್ರಾಮದಲ್ಲಿ ಇತ್ತೀಚೆಗೆ ಕೊಲೆಯಾದ ಗೃಹಿಣಿ ಪುಷ್ಪಾವತಿ ಅವರ ಸಂಬಂಧಿಕರು ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಸ್ಮಶಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಈ 11ದಿನಗಳ ಹಿಂದೆ ನಿಡಘಟ್ಟ ಗ್ರಾಮದ ಬಾಲಾಜಿ ಎಂಬುವರ ಪತ್ನಿ ಪುಷ್ಪಾವತಿ ಅವರು ತಮ್ಮ ಮನೆಯಲ್ಲಿ ನಿಗೂಢ ರೀತಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಪುಷ್ಪಾವತಿ ಅವರ ಪೋಷಕರು ಪುಷ್ಪಾವತಿ ಪತಿ ಬಾಲಾಜಿ, ಅತ್ತೆ ಜಯಲಕ್ಷ್ಮಮ್ಮ, ನಾದಿನಿಯರಾದ ರೇಣುಕಾ ಹಾಗೂ ನಿರ್ಮಲ ಅವರ ಮೇಲೆ ಪೊಲೀಸರಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸರು ಪುಷ್ಪಾವತಿ ಪತಿ ಬಾಲಾಜಿ ಅವರನ್ನು ಬಂಧಿಸಿದ್ದರು. ಆದರೆ ಘಟನೆ ನಡೆದು 11ದಿನಗಳಾದರೂ ಇನ್ನುಳಿದ ಆರೋಪಿಗಳನ್ನು ಬಂಧಿಸದ ಕಾರಣ ಶುಕ್ರವಾರ ನಿಡಘಟ್ಟಕ್ಕೆ ಆಗಮಿಸಿದ ಮೃತಳ ಪೋಷಕರು, ಮೊದಲಿಗೆ ಮೃತಳ ಪತಿಯ ಮನೆಯ ಮುಂದೆ ಬಂದಾಗ ಮನೆಗೆ ಬೀಗ ಜಡಿಯಲಾಗಿತ್ತು.
ಇದರಿಂದ ಆಕ್ರೋಶಗೊಂಡ ಪೋಷಕರು ಹಾಗೂ ಸಂಬಂಧಿಕರು ಅಲ್ಲಿಂದ ಹೆದ್ದಾರಿಗಿಳಿದು 15ನಿಮಿಷಗಳ ಕಾಲ ಪ್ರತಿಭಟನೆ ನಡೆಸಿದರು. ನಂತರ ಅಲ್ಲಿಂದ ಮೃತಳ ಅಂತ್ಯಸಂಸ್ಕಾರವಾದ ಸ್ಮಶಾನ ಸ್ಥಳಕ್ಕೆ ತೆರಳಿದ ಅವರು, ಅಲ್ಲಿ ಕೆಲ ಕಾಲ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮೃತ ಪುಷ್ಪಾವತಿ ಸಹೋದರಿ ಶೀಲಾ ಕುಮಾರ್ ಮಾತನಾಡಿ, ಈ ಕೂಡಲೇ ಪುಷ್ಪಾವತಿ ಕೊಲೆ ಆರೋಪಿಗಳನ್ನು ಬಂಧಿಸಬೇಕು. ಹಾಗೂ ಅವರಿಗೆ ಉಗ್ರವಾದ ಶಿಕ್ಷೆ ವಿಧಿಸಬೇಕು. ಅಲ್ಲದೇ ತಬ್ಬಲಿಗಳಾಗಿರುವ ಪುಷ್ಪಾವತಿ ಮಕ್ಕಳಿಗೆ ಅಗತ್ಯ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ನಂತರ ಮೃತಳ ಉತ್ತರ ಕ್ರಿಯಾದಿ ಭೂಶಾಂತಿ ಕಾರ್ಯವನ್ನು ಬೆಸಗರಹಳ್ಳಿ ಗ್ರಾಮಸ್ಥರ ನೆರವಿನೊಂದಿಗೆ ನೇರವೇರಿಸಲಾಯಿತು.
ಜಯಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ಮೋಹಿತ್ಗೌಡ, ನಗರಾಧ್ಯಕ್ಷ ಸಂಪತ್ಕುಮಾರ್, ಮೃತರ ತಂದೆ ರಾಮಚಂದ್ರು, ಅಣ್ಣಂದಿರಾದ ಧ್ರುವಕುಮಾರ್, ಚಂದ್ರಕುಮಾರ್, ಸತೀಶ್, ಮುಖಂಡ ರಾಮಕೃಷ್ಣ ಹಾಗೂ ಬೆಸಗರಹಳ್ಳಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.